
ಕುಂದಾಪುರ: ಕರ್ತವ್ಯ ಬದ್ಧತೆ ಇರುವ ಯಾರೂ, ಯಾರಿಗೂ ತಲೆಭಾಗಬೇಕಾದ ಸನ್ನಿವೇಶಗಳೇ ಬರೋದಿಲ್ಲ ಎಂದು ರೇ.ಫಾ.ರೋಬರ್ಟ್ ಜ್ಹಡ್ ಎಂ ಡಿಸೋಜ ಸ್ಮಾರಕ ಸೊಸೈಟಿ ಕಾರ್ಯದರ್ಶಿ ನವೀನ್ ಲೋಬೊ ಹೇಳಿದರು.
ನಾಡಾ ಗ್ರಾಮದ ರೇ.ಫಾ.ರೋಬರ್ಟ್ ಜ್ಹಡ್ ಎಂ ಡಿಸೋಜ ಸ್ಮಾರಕ ಐಟಿಐ ಸಂಸ್ಥೆಯಲ್ಲಿ ಗುರುವಾರ ನಡೆದ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಂತ್ರಿಕ ಶಿಕ್ಷಣಗಳು ಕೇವಲ ಅಭ್ಯಾಸಕ್ಕೆ ಮಾತ್ರ ಸೀಮಿತವಾಗದೆ ಭವಿಷ್ಯದ ಜೀವನ ಭದ್ರತೆಯನ್ನು ರೂಪಿಸುವ ತರಬೇತಿ ಕೇಂದ್ರಗಳಾಗಿದೆ. ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಯೋಗ್ಯ ಶಿಕ್ಷಣ ಅವಕಾಶ ದೊರಕಬೇಕು ಎನ್ನುವ ಉದ್ದೇಶದಿಂದ ದಿ.ಆಲ್ಫೋನ್ಸ್ ಲೋಬೊ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ನಾಡಾ ಐಟಿಐ ಸಂಸ್ಥೆಯಿಂದ ಈವರೆಗೆ ಸಾವಿರಾರು ವಿದ್ಯಾರ್ಥಿಗಳು ತರಬೇತಿ ಪಡೆದು ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಮನೋಹರ್ ಆರ್ ಕಾಮತ್ ಅವರು, ಭಿನ್ನವಾದ ಶಿಕ್ಷಣಾಭ್ಯಾಸಗಳನ್ನು ಹೊಂದಿರುವ ಐಟಿಐ ತರಬೇತಿ ಪಡೆದವರಿಗೆ ಅತ್ಯಂತ ಉತ್ತಮವಾದ ಉದ್ಯೋಗ ಅವಕಾಶ ಇದೆ. ಕಳೆದ ಹಲವು ವರ್ಷಗಳಿಂದ ದೇಶ-ವಿದೇಶದ ಪ್ರಸಿದ್ಧ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡೆಸಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುತ್ತಿದೆ. ಗುಣ ಮಟ್ಟದ ಶಿಕ್ಷಣದ ಜೊತೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಶಿಸ್ತು ಹಾಗೂ ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಪ್ಲೇಸ್ಮೆಂಟ್ ಅಧಿಕಾರಿ ರಾಜೇಶ್ ಕೆ.ಸಿ, ಕಿರಿಯ ತರಬೇತಿ ಅಧಿಕಾರಿಗಳಾದ ಮೋಹನ್ಚಂದ್ರ ಪಿ ನಾಯಕ್, ದಿನೇಶ್ ಕೆ ಬೈಂದೂರು, ಆಡಳಿತ ಮಂಡಳಿ ಸದಸ್ಯೆ ಅನಿತಾ ನವೀನ್ ಲೋಬೊ ಇದ್ದರು.
ಕಿರಿಯ ತರಬೇತಿ ಅಧಿಕಾರಿ ರಾಘವೇಂದ್ರ ಆಚಾರ್ ಕಟ್ಬೇಲ್ತೂರ್ ಸ್ವಾಗತಿಸಿದರು, ವಿನಾಯಕ ಕಾಮತ್ ಪ್ರಾರ್ಥಿಸಿದರು, ಕಿಶೋರ್ ಪೂಜಾರಿ ಸಸಿಹಿತ್ಲು ನಿರೂಪಿಸಿದರು.











