
ಮೈಸೂರು: ಡಿಸೆಂಬರ್ನಲ್ಲಿ ಹಸೆಮಣೆ ಏರಬೇಕಿದ್ದ SBI ಉದ್ಯೋಗಿಗಳಿಬ್ಬರು ಪ್ರತ್ಯೇಕವಾಗಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ಹಾಗೂ ಕೇರಳದಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾಗಲು ಸಿದ್ಧವಾಗಿದ್ದ ಜೋಡಿ ನೇಣಿಗೆ ಕೊರಳೊಡ್ಡಿರುವುದು ಕುಟುಂಬದಲ್ಲಿ ಆಘಾತ ಮೂಡಿಸಿದೆ.
ಕಾಸರಗೋಡು ಜಿಲ್ಲೆಯ ಕಾಟುಪಳ್ಳ ಗ್ರಾಮದ ಚಂದ್ರನ್ ಅವರ ಪುತ್ರಿ ಅನುಶ್ರೀ (26) ಮೃತ ಯುವತಿ. ಇತ್ತೀಚೆಗಷ್ಟೇ SBI ಉದ್ಯೋಗಕ್ಕೆ ಸೇರಿದ್ದ ಅನುಶ್ರೀ, ತರಬೇತಿ ವೇಳೆ ಕೇರಳದ ಎರ್ನಾಕುಲಂನ SBIನಲ್ಲಿ ಕೆಲಸ ಮಾಡುತ್ತಿದ್ದ ಇರಿಟ್ಟಿ ಮೂಲದ ಅಮಲ್ ಎಂಬ ಯುವಕನ ಪರಿಚಯವಾಗಿತ್ತು.
ಪರಿಚಯ ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಮದುವೆ ಕೂಡ ನಿಶ್ಚಯವಾಗಿತ್ತು. ಡಿಸೆಂಬರ್ನಲ್ಲಿ ಮದುವೆ ನಡೆಯಬೇಕಿತ್ತು. ಆದರೆ, ಮದುವೆಗೂ ಕೆಲವೇ ತಿಂಗಳು ಬಾಕಿ ಇರುವಾಗ ಜೋಡಿಯ ಬದುಕು ದುರಂತದಲ್ಲಿ ಅಂತ್ಯವಾಗಿದೆ.
ಅನುಶ್ರೀ ಮೈಸೂರು ಜಿಲ್ಲೆಯ ಹುಣಸೂರು ನಗರದ ಸುಬ್ಬಣ್ಣ ಬಡಾವಣೆಯಲ್ಲಿ ವಾಸವಾಗಿದ್ದರು. ಘಟನೆಗೂ ಮುನ್ನ ತಂದೆ-ತಾಯಿ ಹಾಗೂ ಸಹೋದರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು. ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.











