
ಜೈಪುರ: ಆಸ್ತಿ ಹಾಗೂ ಸರ್ಕಾರಿ ಕೆಲಸಕ್ಕಾಗಿ ಹಂತಕರಿಗೆ 7 ಲಕ್ಷ ರೂ. ಸುಪಾರಿ ಕೊಟ್ಟು ಮಗಳೇ ಅಮ್ಮನನ್ನು ಕೊಲೆ ಮಾಡಿಸಿದ ಪ್ರಕರಣ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಆಯುಷಿ ಶರ್ಮಾ (23) ಆಸ್ತಿ ಮತ್ತು ತಾಯಿಯ ಸರ್ಕಾರಿ ಉದ್ಯೋಗಕ್ಕಾಗಿ ತನ್ನ ಚಿಕ್ಕಪ್ಪ ಮೋಹನ್ ಸ್ವರೂಪ್ ಮತ್ತು ಸೋದರಸಂಬಂಧಿ ಬಲರಾಮ್ ಅಲಿಯಾಸ್ ರವಿ ಜೊತೆ ಸೇರಿ ಈ ಸಂಚು ರೂಪಿಸಿದ್ದಳು. ಬಳಿಕ ಕೊಲೆಗಾಗಿ ಬಾಡಿಗೆ ಹಂತಕರನ್ನು ನೇಮಿಸಿದ್ದಳು. ಅದರಂತೆ ಸುಪಾರಿ ಹಂತಕರು ಸ್ಕಾರ್ಪಿಯೋ ಎಸ್ಯುವಿಯಿಂದ ಡಿಕ್ಕಿ ಹೊಡೆಸಿ ಆಯುಷಿ ತಾಯಿ ನೀರಜ್ ಶರ್ಮಾ ಅವರನ್ನು ಹತ್ಯೆ ಮಾಡಿದ್ದರು. ಬಳಿಕ ಕೊಲೆಯನ್ನು ಅಪಘಾತದಂತೆ ಬಿಂಬಿಸಿದ್ದರು.
ಕೊಲೆಯಾದ ನೀರಜ್ ಶರ್ಮಾ (45) ನ್ಯಾಯಾಲಯದಲ್ಲಿ ಕೆಳ ವಿಭಾಗದ ಗುಮಾಸ್ತರಾಗಿ (ಎಲ್ಡಿಸಿ) ಕೆಲಸ ಮಾಡುತ್ತಿದ್ದರು. ಜು.3ರಂದು ನೀರಜ್ ತಮ್ಮ ಮಗನನ್ನು ಟ್ಯೂಷನ್ಗೆ ಬಿಟ್ಟು ಮನೆಗೆ ಹಿಂತಿರುಗುತ್ತಿದ್ದಾಗ, ಪ್ರತಾಪ್ ನಗರ ಬಳಿ 130 ಕಿ.ಮೀ ವೇಗದಲ್ಲಿ ಬಂದ ಸ್ಕಾರ್ಪಿಯೋ ಕಾರು ಡಿಕ್ಕಿಯಾಗಿತ್ತು. ಈ ವೇಳೆ ಅವರು 100 ಅಡಿಗಳಷ್ಟು ದೂರ ಹಾರಿ ಬಿದ್ದು ಸಾವನ್ನಪ್ಪಿದ್ದರು. ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದರು.









