ನೇಪಾಳಕ್ಕೆ ಮತ್ತೆ ವಿನಾಶಕಾರಿ ಪ್ರವಾಹದ ಎಚ್ಚರಿಕೆ : ʻಮಹಾಕಾಳಿʼ ಸೇರುವ ಚೌಲಾನಿ ನದಿಗೆ ಭೂಕುಸಿತ – ಕಹಳೆ ನ್ಯೂಸ್

ಕಠ್ಮಂಡು: ವಿನಾಶಕಾರಿ ಪ್ರವಾಹದಲ್ಲಿ ಸಾವಿರಾರು ಜನರನ್ನ ಕಳೆದುಕೊಂಡಿರುವ ನೇಪಾಳಕ್ಕೆ ಈಗ ಮತ್ತೊಂದು ಪ್ರವಾಹದ ಮುನ್ಸೂಚನೆ ಬಂದಿದೆ. ದಾರ್ಚುಲಾ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಚೌಲಾನಿ ನದಿಯ ಹರಿವಿಗೆ ಭಾಗಶಃ ಅಡ್ಡಿಯಾಗಿದೆ. ಇದರಿಂದ ನದಿಯ ಕೆಳಭಾಗದಲ್ಲಿ ವಾಸಿಸುವ ಜನರಿಗೆ ಹಠಾತ್ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಅಪಿ ಹಿಮಾಲ್ ಗ್ರಾಮೀಣ ಪುರಸಭೆಯ ಭಟ್ಟಾರ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಅಪಾರ ಪ್ರಮಾಣದ ಮಣ್ಣು ಮತ್ತು ಅವಶೇಷಗಳು ನದಿಗೆ ಕುಸಿದಿವೆ. ಇದರಿಂದ ನದಿಯ ನೀರಿನ ಹರಿವು ಅಸ್ತವ್ಯಸ್ತಗೊಂಡಿದೆ. ಮತ್ತಷ್ಟು ಭೂಕುಸಿತ ಸಂಭವಿಸಿ ನದಿ ಸಂಪೂರ್ಣವಾಗಿ ಬಂದ್ ಆಗುವ ಸಾಧ್ಯತೆಯಿದೆ. ಇದರಿಂದ ನೀರು ಏಕಾಏಕಿ ಉಕ್ಕಿ ಹರಿದು ಕೆಳಭಾಗದಲ್ಲಿ ದಿಢೀರ್ ಪ್ರವಾಹ ಉಂಟಾಗಬಹುದು ಎಂದು ದಾರ್ಚುಲಾ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.











