
ಬಾಗೇಪಲ್ಲಿ : ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿ ಶಾಲೆಗೆ ಮತ್ತು ತಂದೆ ತಾಯಿಗೆ ಕೀರ್ತಿ ತರಬೇಕು ಎಂದು ಪ್ರೌಢಶಾಲಾ ಮುಖ್ಯ ಶಿಕ್ಷಕ ವಿ.ಮಲ್ಲಪ್ಪ ಅವರು ಅಭಿಪ್ರಾಯ ಪಟ್ಟರು.
ಅವರು ಸೋಮವಾರ ಬಿಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಸಾಲು ಮರದ ತಿಮ್ಮಕ್ಕ ಇಕೋ ಕ್ಲಬ್ ಅಡಿಯಲ್ಲಿ ನಡೆಸಲಾದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಮಾಸ್ಕ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಲು ಹಿಂದೇಟು ಹಾಕಬಾರದು. ಜೀವನದಲ್ಲಿ ಸೋಲು-ಗೆಲುವು ಸಹಜ. ಇಂದು ಸೋತವರು ನಾಳೆ ಅದೇ ಅವರ ಗೆಲುವಿನ ಮೆಟ್ಟಿಲಾಗಬಹುದು ಎಂದು ಅವರು ತಿಳಿಸಿದರು. ಪ್ರಭಾರ ಮುಖ್ಯ ಶಿಕ್ಷಕ ಡಿ.ಸುಭಾನ್ ಮಾತನಾಡಿ ದೇಶದಲ್ಲಿ ಕೊರೋನಾ ಮಹಮ್ಮಾರಿ ವ್ಯಾಪಕವಾಗಿ ಹರಡುತ್ತಿರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮತ್ತು ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದರು. ಉರ್ದು ಶಾಲೆಯ ಮುಖ್ಯ ಶಿಕ್ಷಕ ಬಿ.ಎನ್.ನಾರಾಯಣ ಮಾತನಾಡಿ ಇಕೋ ಕ್ಲಬ್ ಶಾಲೆಗಳಲ್ಲಿ ಬೇರೆ ಬೇರೆ ಚಟುವಟಿಕೆಗಳಿಂದ ಪರಿಸರ ಉಳಿಸಿ ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ಇದರ ಹಿಂದೆ ಇಲಾಖಾ ಅಧಿಕಾರಿಗಳ ಮಾರ್ಗದರ್ಶನ, ಇಕೋ ಕ್ಲಬ್ ಸಂಯೋಜಕರ ಸಲಹೆ ಹಾಗೂ ಶಿಕ್ಷಕರ ಅರ್ಪಣಾ ಮನಸ್ಸು ವಿದ್ಯಾರ್ಥಿಗಳ ಮೂಲಕ ಕಾರ್ಯ ಪ್ರವೃತ್ತವಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ ಎಂದರು. ಚಿತ್ರ ಕಲೆ ಸ್ಪರ್ಧೆಯಲ್ಲಿ 6ನೇ ತರಗತಿಯ ಸುಪ್ರಿಯಾ (ಪ್ರಥಮ),7ನೇ ತರಗತಿಯ ಅಶೋಕ (ದ್ವೀತಿಯ), 6ನೇ ತರಗತಿಯ ಅಜೇಯ್ ಕುಮಾರ್ (ತೃತೀಯ)ಬಹುಮಾನ ಪಡೆದ ವಿದ್ಯಾರ್ಥಿಗಳು. ಹಾಗೆಯೇ ಪ್ಲಾಸ್ಟಿಕ್ ನ ಹಾನಿ ಮತ್ತು ಮರುಬಳೆ ಕುರಿತಾದ ಪ್ರಬಂಧ ಸ್ಪರ್ಧೆಯಲ್ಲಿ 7ನೇ ತರಗತಿಯ ಅಂಜಲಿ (ಪ್ರಥಮ), ಪರಿಸರ ಮಾಲಿನ್ಯ ಕುರಿತಾದ ಪ್ರಬಂಧ ಸ್ಪರ್ಧೆಯಲ್ಲಿ ಕೆ.ಎ.ಲಾವಣ್ಯ (ದ್ವೀತಿಯ), ಪಿಂಕಿ (ತೃತೀಯ) ಬಹುಮಾನ ಪಡೆದರೆ ಮತ್ತಿತರ ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನ ಗಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಎಂ.ಎಸ್.ರಾಮಚಂದ್ರರಾವ್, ಶ್ರೀಮತಿ ತೋಳಸಮ್ಮ, ಮಂಜುಳಾ, ಪಿ.ಕೃಷ್ಣಪ್ಪ ಹಾಜರಿದ್ದರು. ವಿಜ್ಞಾನ ಶಿಕ್ಷಕಿ ಆರ್.ಸವಿತಾ ಸ್ವಾಗತಿಸಿ , ವಂದಿಸಿದರು.









