Sunday, September 6, 2026
ಸುದ್ದಿ

ಆಹಾರದ ಜಾಗೃತಿಗಾಗಿ ‘ಅನ್ನಬ್ರಹ್ಮ ಚಾತುರ್ಮಾಸ್ಯ’ :  ರಾಮಚಂದ್ರಾಪುರ ಶ್ರೀ :  ಚಾತುರ್ಮಾಸ್ಯ ಆಹ್ವಾನ ಪತ್ರಿಕೆ ಲೋಕಾರ್ಪಣೆ – ಕಹಳೆ ನ್ಯೂಸ್ 

ಅನ್ನವನ್ನು ದೇವರೆಂದು ಪರಿಭಾವಿಸುವ ಪರಂಪರೆ ಸನಾತನ ಭಾರತದ್ದು. ಆಹಾರ ಇಹದಲ್ಲಿ ಮನುಷ್ಯನ ಸರ್ವಾಂಗ ಸಮೃದ್ಧಿಗೆ ಕಾರಣ ಮಾತ್ರವಲ್ಲದೇ, ಪರದಲ್ಲಿ ಉತ್ತಮ ಗತಿ ಪ್ರಾಪ್ತಿಗೂ ಕಾರಣ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ದಿನಾಂಕ 17.06.2026 ರಂದು ‘ಅನ್ನಬ್ರಹ್ಮ ಚಾತುರ್ಮಾಸ್ಯ’ ದ ಆಹ್ವಾನ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಶ್ರೀಗಳು, ಚಾತುರ್ಮಾಸ್ಯ ವ್ರತ ಗುರುಗಳಿಗಾದರೆ, ಶಿಷ್ಯಭಕ್ತರಿಗೆ ಇದು ಹಬ್ಬ. ಈ ಹಿನ್ನೆಲೆಯಲ್ಲಿ ಜ್ಞಾನೋದ್ದೀಪನದ ಜೊತೆಗೆ ಆಹಾರದ ಕುರಿತಾದ ಋಷಿದರ್ಶನದ ಪ್ರಸ್ತುತಿಗೆ ಈ ಚಾತುರ್ಮಾಸ್ಯವನ್ನು ಬಳಸಿಕೊಳ್ಳಲಾಗುತ್ತಿದೆ. ಅನ್ನವನ್ನು ವ್ಯರ್ಥ ಮಾಡಬಾರದು. ಇಂದು ಶ್ರೀಮಂತಿಕೆ ಹೆಚ್ಚಾದಷ್ಟು ಅನ್ನವನ್ನು ವ್ಯರ್ಥಮಾಡುವ ದುರಾಚಾರ ಹೆಚ್ಚಾಗುತ್ತಿದೆ. ಇವೆಲ್ಲವುಗಳ ಹಿನ್ನೆಲೆಯಲ್ಲಿ ಆಹಾರದ ಕುರಿತಾದ ಜನಜಾಗೃತಿ ಮೂಡಿಸುವ ಕಾರ್ಯ ಇಲ್ಲಿ ನಡೆಯಲಿದೆ ಎಂದರು.

 

*ಪ್ರಾಣಿ – ಮನುಷ್ಯ*: ಪ್ರಾಣಿ ಪಕ್ಷಿಗಳು ಹೆಚ್ಚಿನ ಸಮಯವನ್ನು ಆಹಾರ ಹೊಡುಕಿಕೊಂಡೇ ಜೀವನ ನಡೆಸುವುದನ್ನು ನೋಡುತ್ತೇವೆ. ಆದರೆ ಅವು ಸರಿಯಾದ ಆಹಾರವನ್ನು ಮಾತ್ರ ಸ್ವೀಕರಿಸುವುದನ್ನು ಕಾಣುತ್ತೇವೆ. ಆದರೆ ಮನುಷ್ಯ ಹಾಗಲ್ಲ. ಯೋಗ್ಯವಲ್ಲದ ಅಹಾರವನ್ನು ಹೇಗೆ ಹೇಗೋ ಸ್ವೀಕರಿಸುತ್ತಿರುವ ಪ್ರವೃತ್ತಿಯನ್ನು ನೋಡುತ್ತಿದ್ದೇವೆ. ಆಹಾರ ಜೀವನದ ಬಹುಮುಖ್ಯ ಅಂಗವಾಗಿದ್ದು, ಇಂದು ಆಹಾರದ ಹಿನ್ನೆಲೆ, ಆಹಾರದ ತಯಾರಿ, ಸೇವನೆಗೆ ಸಮರ್ಪಕ ಪ್ರಾಮುಖ್ಯತೆ ನೀಡದೇ ಇರುವುದು ವಿಷಾದಕರ ಎಂದರು.

ಈ ಸಂದರ್ಭದಲ್ಲಿ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಡಿ.ಡಿ ಶರ್ಮಾ, ಪ್ರದೀಪ್ ನಾಯಕ್, ಮಹೇಶ್ ಶೆಟ್ಟಿ, ಆರ್.ಎಸ್ ಹೆಗಡೆ ಹರಗಿ, ಮಂಜುನಾಥ ಸುವರ್ಣಗದ್ದೆ, ಪ್ರವೀಣ್ ಭೀಮನಕೋಣೆ, ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ ಸೇರಿದಂತೆ ಚಾತುರ್ಮಾಸ್ಯದ ಸಂಯೋಜಕರು ಹಾಗೂ ಎಲ್ಲಾ ಭಾಗಗಳ ಪ್ರಮುಖರು ಉಪಸ್ಥಿತರಿದ್ದರು.

 

*ಅನ್ನಬ್ರಹ್ಮ ಚಾತುರ್ಮಾಸ್ಯ* : ಗೋಕರ್ಣದ ಅಶೋಕೆಯ ಪರಿಸರದಲ್ಲಿ ಈ ವರ್ಷದ ಚಾತುರ್ಮಾಸ್ಯ ನಡೆಯುತ್ತಿದ್ದು, ದಿನಾಂಕ 29.07.2026 ರಿಂದ 26.09.2026 ವರೆಗೆ ಆಹಾರದ ಕುರಿತಾದ ಜಾಗೃತಿಯ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ನಡೆಯಲಿದೆ. ಚಾತುರ್ಮಾಸ್ಯ ವ್ರತ ಗುರುಗಳಿಗಾದರೆ, ಶಿಷ್ಯಭಕ್ತರಿಗೆ ಇದು ಹಬ್ಬ ಎಂಬ ಪರಿಕಲ್ಪನೆಯಲ್ಲಿ ಪ್ರತಿವರ್ಷದ ಚಾತುರ್ಮಾಸ್ಯವನ್ನು ಸಮೂಹದ ಒಳಿತಿಗೆ ಪೂರಕವಾಗಿ ಯೋಜಿಸುತ್ತಾ ಬಂದಿದ್ದು, ಪ್ರತಿವರ್ಷ ಒಂದೊಂದು ವಿಷಯಾಧಾರಿತವಾಗಿ ಚಾತುರ್ಮಾಸ್ಯದಲ್ಲಿ ಸಮಾಜ ಜಾಗೃತಿಯನ್ನು ಮೂಡಿಸುತ್ತಿರುವುದು ಶ್ರೀರಾಮಚಂದ್ರಾಪುರ ಮಠದ ವಿಶೇಷತೆಯಾಗಿದೆ.

ಈ ಚಾತುರ್ಮಾಸ್ಯದ ಸಮಯದಲ್ಲಿ ಆಹಾರದ ಕುರಿತಾಗಿ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳು ಇರಲಿದ್ದು,
ಭೋಜನವೆಂಬ ತಪಸ್ಸು, ಆಹಾರ ಯಾವಾಗ ಸ್ವೀಕರಿಸಿದರೆ ಹಿತ? ಜಲಪಾನದ ನಿಯಮಗಳು, ಆಹಾರದ ಉದ್ದೇಶ, ಉಪವಾಸ, ಭೋಜನದ ಬಳಿಕ ಪಾಲಿಸಬೇಕಾದ ನಿಯಮಗಳು, ಭೋಜನ ಪಾತ್ರೆಗಳು ಸೇರಿದಂತೆ ಅನೇಕ ವಿಶಿಷ್ಟ ಪ್ರವಚನ ಮಾಲಿಕೆಗಳನ್ನು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅನುಗ್ರಹಿಸಲಿದ್ದಾರೆ. ಜ್ಞಾನೋದ್ದೀಪನದ ಜೊತೆಗೆ ಪ್ರಾಚೀನ ವಿಧಾನದ ಆಹಾರವೂ ಈ ಚಾತುರ್ಮಾಸ್ಯದಲ್ಲಿ ಇರಲಿವೆ.

– ಸಂದೇಶ ತಲಕಾಲಕೊಪ್ಪ
ಶ್ರೀಸಂಯೋಜಕ – ಮಾಧ್ಯಮ
8970228945