
ಮುಂಡ್ಕೂರಿನ ಇಂದಿರಾ ನಗರದಲ್ಲಿ ಕಟಪಾಡಿ ರೋಟರಿ ಕ್ಲಬ್, ತನ್ನ ಬೆಳ್ಳಿಹಬ್ಬ ವರ್ಷಾಚರಣೆಯ ನೆನಪಿನಲ್ಲಿ ಯಕ್ಷಗಾನ ಕಲಾರಂಗದ ಮೂಲಕ ಸಾವಿತ್ರಿ ಇವರ ಬೌದ್ಧಿಕ ದೋಷವುಳ್ಳ ಪುತ್ರಿ ಶ್ರುತಿ ಇವರಿಗೆ ನಿರ್ಮಿಸಿದ ನೂತನ ಮನೆ ‘ಸಾವಿತ್ರಿ ಸದನ’ ಹಸ್ತಾಂತರಗೊಂಡಿತು. ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ರೋಟರಿ ಗವರ್ನರ್ ಬಿ. ಎಂ. ಭಟ್ ರೊಟರಿ ಸಂಸ್ಥೆ ಅಂತಾರಾಷ್ಟ್ರೀಯವಾಗಿ ಮಾಡುತ್ತಿರುವ ಕಾರ್ಯಕ್ರಮ ವಿವರಿಸಿ, ಯಕ್ಷಗಾನ ಕಲಾರಂಗ ಯಾವುದೆ ಪ್ರಚಾರ ಬಯಸದೆ ಸಮಾಜಪರವಾಗಿ ಮಾಡುತ್ತಿರುವ ಕೆಲಸ ಸಾಮಾಜಿಕ ಸಂಘಟನೆಗಳಿಗೆ ಮಾದರಿಯಾಗಿದೆ. ರೊಟರಿ ಸದಸ್ಯರಾದ ನಾವೂ ಕಲಾರಂಗದ ಸದಸ್ಯರಾಗಿ ಸಂಸ್ಥೆಯ ಯೋಜನೆಗಳಿಗೆ ಕೈಜೋಡಿಸುತ್ತೇವೆ ಎಂದು ಹೇಳಿದರು. ಮನೆಯ ಪ್ರಾಯೋಜಕತ್ವ ವಹಿಸಿದ ಇನ್ವೆಂಜರ್ ಸಂಸ್ಥೆಯ ಮಾಲಕ ಕೆ. ಸತ್ಯೇಂದ್ರ ಪೈಯವರು ವಿಕಲಚೇತನ ಹುಡುಗಿಗೆ ಮನೆ ನಿರ್ಮಿಸಿ ಕೊಡುವ ಮೂಲಕ ಅವಳ ತಾಯಿಯ ಕಷ್ಟದಲ್ಲಿ ಭಾಗಿಯಾದ ಸಂತೃಪ್ತಿ ನನ್ನದಾಯಿತು. ನನಗೆ ಈ ಅವಕಾಶ ಕಲ್ಪಿಸಿಕೊಟ್ಟ ಯಕ್ಷಗಾನ ಕಲಾರಂಗಕ್ಕೂ, ಕೇವಲ ಎರಡೂವರೆ ತಿಂಗಳಲ್ಲಿ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟ ಎಂ. ಗಂಗಾಧರ ರಾವ್ ಅವರಿಗೂ ಕೃತಜ್ಞತೆ ಹೇಳಿ, ಸಂಸ್ಥೆಗೆ ರೂ. 50,000/- ದೇಣಿಗೆ ನೀಡಿದರು. ರೋಟರಿ ಸಹಾಯಕ ಗವರ್ನರ್ ಹೇಮಂತ ಯು. ಕಾಂತ ಅವರು ಪಾರದರ್ಶಕವಾಗಿ ಕೆಲಸ ಮಾಡುವ ಕಲಾರಂಗವನ್ನು ಶ್ಲಾಘಿಸಿ, ಈ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಯವರು ನಮಗೆ ಅನುಕರಣೀಯ ವ್ಯಕ್ತಿಗಳಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟರು. ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಸುದರ್ಶನ ಮಲ್ಯರು ಸತ್ಯೇಂದ್ರ ಪೈಗಳ ಶಿಕ್ಷಣ ಮತ್ತು ಸಾಮಾಜಿಕ ಕೊಡುಗೆ ದೊಡ್ಡದು. ತಮ್ಮ ಸ್ವಂತ ಹಣ ಖರ್ಚು ಮಾಡಿ ಅದರ ಗೌರವವನ್ನು ಕ್ಲಬ್ಗೆ ಕಲ್ಪಿಸುವ ಅವರು ಕ್ಲಬ್ಬಿನ ದೊಡ್ಡ ಸಂಪತ್ತು ಎಂದು ಹೇಳಿದರು. ಕಟಪಾಡಿ ರೋಟರಿಯ ಸ್ಥಾಪಕ ಅಧ್ಯಕ್ಷರಾದ ರಂಜನ್ ಹೆಗ್ಡೆಯವರು ಶುಭಾಶಂಸನೆಗೈದರು. ರೋಟರಿ ಕಾರ್ಯದರ್ಶಿ ಟಿ. ಆರ್. ದೊಡ್ಡಮಣಿ ರೋಟರಿ ಸಂಸ್ಥೆಯ ಪರವಾಗಿ ಎಲ್ಲರಿಗೆ ಕೃತಜ್ಞತೆ ಹೇಳಿದರು. ಝೋನಲ್ ಲೆಫ್ಟಿನೆಂಟ್ ರಮಾನಂದ ಭಟ್, ಆರ್.ಸಿ.ಸಿ. ಜಿಲ್ಲಾಧ್ಯಕ್ಷ ಜಗನ್ನಾಥ ಕೋಟೆ, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ಯು. ವಿಶ್ವನಾಥ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ನಿರ್ವಹಿಸಿದರು. ಸಂಸ್ಥೆಯವತಿಯಿಂದ ನಾರಾಯಣ ಎಂ. ಹೆಗಡೆ ಕಟಪಾಡಿ ರೋಟರಿಗೆ ಕೃತಜ್ಞತೆ ಸಲ್ಲಿಸಿದರು. ಕಟಪಾಡಿ ರೋಟರಿ ಸಂಸ್ಥೆಯ ಸದಸ್ಯರುಗಳಾದ ಆಶಾ ಅಂಚನ್, ಶಕುಂತಲಾ ಮೇಡಮ್, ತುಳಸಿ ದೇವಾಡಿಗ, ಗಣೇಶ ಕಿಣಿ, ಲಕ್ಷ್ಮೀ ಮೇಡಮ್, ಶ್ರೀಕರ ಅಂಚನ್, ವಿಠಲ ಶೆಟ್ಟಿ ಹಾಗೂ ಯಕ್ಷಗಾನ ಕಲಾರಂಗದ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಸದಸ್ಯರುಗಳಾದ ಭುವನಪ್ರಸಾದ್ ಹೆಗ್ಡೆ, ಆನಂತರಾಜ್ ಉಪಾಧ್ಯ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.











