
ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರದೀಪ್ತ ಸಾಂಸ್ಕೃತಿಕ ಸಂಘದ ಉದ್ಘಾಟನೆ , ಓಣಂ ಆಚರಣೆ, ರಕ್ಷಾಬಂಧನ ಕಾರ್ಯಕ್ರಮ, ಸಂಸ್ಕೃತ ಸಂಕಲ್ಪಮ್ ಐಕ್ಯವು ಆಜಾದ್ ಭವನದಲ್ಲಿ ನಡೆಯಿತು. ಶ್ರೀರಾಮ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪದವಿ ವಿಭಾಗದ ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರಕಟ್ಟೆ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಓಣಂ, ರಕ್ಷಾಬಂಧನ ಹಾಗೂ ಸಂಸ್ಕೃತ ಭಾಷೆಯ ಮಹತ್ವವನ್ನು ತಿಳಿಸುತ್ತಾ “ವಿವಿಧತೆಯಲ್ಲಿ ಏಕತೆ” ಎಂಬ ಭಾರತೀಯ ಸಂಸ್ಕೃತಿಯ ಮೂಲತತ್ವವನ್ನು ಪ್ರತಿಬಿಂಬಿಸುವ ನಮ್ಮ ವೈವಿಧ್ಯಮಯ ಹಬ್ಬಗಳಾದ ಓಣಂ, ರಕ್ಷಾಬಂಧನ ಆಚರಣೆಗಳ ಮಹತ್ವವನ್ನು ತಿಳಿದುಕೊಂಡು, ಅವುಗಳ ಮೂಲಕ ಸಮಾಜದಲ್ಲಿ ಪರಸ್ಪರ ಐಕ್ಯತೆಯನ್ನು ಮೂಡಿಸಿ ನಮ್ಮ ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುವ ಜಾಗೃತಿ ಮೂಡಿಸೋಣ ಎಂದು ತಿಳಿಸಿದರು.
ಜೊತೆಗೆ ಕಳೆದ ಒಂದು ವಾರದ ಕಾಲ ಕಾಲೇಜಿನಲ್ಲಿ ಸಂಸ್ಕೃತ ಸಪ್ತಾಹದ ವಿವಿಧ ಚಟುವಟಿಕೆಗಳು ನಡೆದಿದ್ದು ಇದರ ಸಮಾರೋಪ ಕಾರ್ಯಕ್ರಮದ ವಿಚಾರವಾಗಿ ಮಾತನಾಡುತ್ತಾ ಪ್ರತಿಯೊಬ್ಬನೂ ಸಂಸ್ಕೃತದ ರಕ್ಷಣೆಯ ಸಂಕಲ್ಪವನ್ನು ತೊಡಬೇಕು ಎಂದರು. ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಶುಮಂದಿರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಮುಖ್ಯ ಅಭ್ಯಾಗತರಾಗಿ ಆಗಮಿಸಿ, ಚೆಂಡೆ ಬಾರಿಸಿ ಸಾಂಸ್ಕೃತಿಕ ಸಂಘದ ಉದ್ಘಾಟನೆಯನ್ನು ನೆರವೇರಿಸಿದರು. ಈ ಬಾರಿಯ ರಕ್ಷಾಬಂಧನವನ್ನು ಕಾಲೇಜಿನ ಮಾತೃಭಾರತಿಯ ಪದಾಧಿಕಾರಿಗಳ ಜೊತೆಗೆ ಆಚರಿಸಲಾಗಿದ್ದು ಶ್ರೀಮತಿ ಭಾರತಿ ಬೋಳಂತೂರು (ಮಾತೃಭಾರತಿ ಅಧ್ಯಕ್ಷರು.) ಶ್ರೀಮತಿ ಶಾರದಾ (ಮಾತೃಭಾರತಿ ಕಾರ್ಯದರ್ಶಿ) ಇವರು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು.
ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಅಕ್ಷತಾ ಮಂಗಳೂರು, ಕಾಲೇಜಿನ ಉಪಪ್ರಾಂಶುಪಾಲೆ ಶ್ರೀಮತಿ ಸುಕನ್ಯಾ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕಿ ಕು. ನಾಗಲತಾ, ಸಹಸಂಯೋಜಕಿ ಕು. ದಿವ್ಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಓಣಂ ಹಬ್ಬದ ಪ್ರಯುಕ್ತ ಪೂಕಳಂ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಕೇರಳ ಶೈಲಿಯ ತಿರುವಾದಿರ ನೃತ್ಯ ಪ್ರದರ್ಶಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳು
ಪರಸ್ಪರ ರಕ್ಷೆ ಕಟ್ಟಿಕೊಂಡು ಸಿಹಿಯನ್ನು ಸವಿದು ಸಂಭ್ರಮಿಸಿದರು. ವಿದ್ಯಾರ್ಥಿಗಳಾದ ಕು. ಪ್ರಜ್ಞಾ ಅಂತಿಮ ಬಿಸಿಎ ಸ್ವಾಗತಿಸಿ, ಬಿಎ ವಿದ್ಯಾರ್ಥಿನಿ ಕು. ಅಕ್ಷತಲಕ್ಷ್ಮೀ ವಂದಿಸಿ, ಬಿಸಿಎ ವಿದ್ಯಾರ್ಥಿನಿ ಕು. ತ್ರಿಷಾ ಕಾರ್ಯಕ್ರಮ ನಿರ್ವಹಿಸಿದರು.











