ಟಿಬೆಟ್ ಗಡಿಯಲ್ಲಿ ಒಡೆದ ಸರೋವರ, ಮತ್ತೆ ಪ್ರವಾಹದ ಭೀತಿ : ನೇಪಾಳದಲ್ಲಿ ಹೈ ಅಲರ್ಟ್, ರಕ್ಷಣಾ ಕಾರ್ಯಾಚರಣೆ ಸ್ಥಗಿತ – ಕಹಳೆ ನ್ಯೂಸ್

ಕಠ್ಮಂಡು: ಟಿಬೆಟ್ ಗಡಿಯಲ್ಲಿ ಸರೋವರ ಒಡೆದು ಮತ್ತೆ ನೇಪಾಳದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ನದಿ ಪಾತ್ರದ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ
ಜಲ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 469ಕ್ಕೆ ಏರಿಕೆಆಗಿರುವ ಬೆನ್ನಲ್ಲೆ ಟಿಬೆಟ್ ಗಡಿ ಭಾಗದಲ್ಲಿ ಮತ್ತೊಂದು ಸರೋವರ ಒಡೆದಿದೆ ಎಂದು ನೇಪಾಳ ಸರ್ಕಾರ ಎಚ್ಚರಿಕೆ ನೀಡಿದೆ. ಇದರಿಂದಾಗಿ ಮತ್ತೆ ಜಲಪ್ರಳಯ ಸಂಭವಿಸುವ ಅಪಾಯ ಎದುರಾಗಿದ್ದು, ರಕ್ಷಣಾ ಸಿಬ್ಬಂದಿ ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಟಿಬೆಟ್ ಗಡಿ ಭಾಗದಲ್ಲಿ ಸರೋವರ ಒಡೆದಿರುವ ಮಾಹಿತಿ ಲಭ್ಯವಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿರುವ ಎಲ್ಲಾ ಭದ್ರತಾ ಸಿಬ್ಬಂದಿ, ರಕ್ಷಣಾ ಕಾರ್ಯಕರ್ತರು ಮತ್ತು ಸಾರ್ವಜನಿಕರು ತೀವ್ರ ಎಚ್ಚರಿಕೆಯಿಂದಿರಬೇಕು ಹಾಗೂ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು” ಎಂದು ನೇಪಾಳ ಪೊಲೀಸರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ್ತೊಂದೆಡೆ, ಟಿಬೆಟ್ನಲ್ಲಿ ಭೀಕರ ಪ್ರವಾಹದ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರವೂ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.











