
ಚಿಕ್ಕಬಳ್ಳಾಪುರ: ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಬಳಿ ಚಿನ್ನದ ಪುಡಿ ಪತ್ತೆಯಾಗಿದೆ. ಬ್ಯಾಂಕಾಕ್ನಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು ಪ್ರಯಾಣಿಕರ ಬಳಿ ಒಟ್ಟು 260 ಗ್ರಾಂ ಚಿನ್ನದ ಪುಡಿ ಪತ್ತೆಯಾಗಿದ್ದು, CISF ಸಿಬ್ಬಂದಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಕೆಐಎ ಟರ್ಮಿನಲ್-1ರಲ್ಲಿ CISF ಸಿಬ್ಬಂದಿ ಪ್ರಯಾಣಿಕರನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಚಿನ್ನದ ಪುಡಿ ಪತ್ತೆಯಾಗಿದೆ. ಲಕ್ಷ್ಮಣ ಹಾಗೂ ರಾಘವೇಂದ್ರ ಎಂಬ ಇಬ್ಬರು ಪ್ರಯಾಣಿಕರು ಪ್ಯಾಂಟ್ನ ಸೊಂಟದ ಭಾಗದಲ್ಲಿ ವಿಶೇಷವಾಗಿ ಹೊಲಿಗೆ ಹಾಕಿ, ಎರಡು ಪ್ಯಾಕೆಟ್ಗಳಲ್ಲಿ ಚಿನ್ನದ ಪುಡಿಯನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ.
ಬ್ಯಾಂಕಾಕ್ನಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು, ಬಳಿಕ ಬೆಂಗಳೂರಿನಿಂದ ಅಹಮದಾಬಾದ್ಗೆ ತೆರಳಲು ಸಿದ್ಧರಾಗಿದ್ದರು. ತಪಾಸಣೆ ವೇಳೆ ಅನುಮಾನಗೊಂಡ CISF ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಚಿನ್ನದ ಪುಡಿ ಪತ್ತೆಯಾಗಿದೆ. ಒಟ್ಟು 260 ಗ್ರಾಂ ಚಿನ್ನದ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನದ ಪುಡಿ ಹಾಗೂ ಇಬ್ಬರು ಪ್ರಯಾಣಿಕರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಚಿನ್ನದ ಕಳ್ಳಸಾಗಣೆ ತಡೆಗೆ CISF ಸಿಬ್ಬಂದಿ ಕಟ್ಟುನಿಟ್ಟಿನ ನಿಗಾ ಮುಂದುವರಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.











