
ಚೆನ್ನೈ : ಮೈಸೂರು–ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ನೀಡಲಾದ ಉದ್ದಿನ ವಡೆಯೊಂದರೊಳಗೆ ಫೆವಿಕ್ವಿಕ್ ಟ್ಯೂಬ್ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಭಾನುವಾರ ನಡೆದ ಈ ಘಟನೆಯಲ್ಲಿ, ರೈಲು ಸಂಖ್ಯೆ 20608ರಲ್ಲಿ ಪ್ರಯಾಣಿಸುತ್ತಿದ್ದ ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ ಸದಸ್ಯ ಡಿ. ಶೇಖರ್ ಎಂಬವರಿಗೆ ಈ ಆಘಾತಕಾರಿ ಅನುಭವವಾಗಿದೆ.
ಸಂಜೆ ವಂದೇ ಭಾರತ್ ರೈಲಿನೊಳಗೆ ಚಹದ ಜತೆ ನೀಡಿದ್ದ ಉದ್ದಿನ ವಡೆಯನ್ನು ತಿನ್ನುವ ವೇಳೆ ಅದರೊಳಗೆ ಇದ್ದ ಫೆವಿಕ್ವಿಕ್ ಟ್ಯೂಬ್ ಕಚ್ಚಿದಾಗ ಒಡೆದು, ಅದರಲ್ಲಿದ್ದ ಅಂಟುವ ದ್ರವ ಶೇಖರ್ ಅವರ ತುಟಿಗಳಿಗೆ ಅಂಟಿಕೊಂಡಿದೆ. ತಕ್ಷಣವೇ ಅದನ್ನು ಹೊರತೆಗೆದ ಕಾರಣ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.
ಸಂಜೆ ಸುಮಾರು 3 ಗಂಟೆಗೆ ತಿಂಡಿ ನೀಡಲಾಗಿತ್ತು ಎಂದು ಇವರ ಜತೆಗಿದ್ದ ಡಾ. ಸತ್ಯಮೂರ್ತಿ ಬಾಲಸುಬ್ರಹ್ಮಣ್ಯಂ ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣವೇ ಟಿಕೆಟ್ ಪರಿಶೀಲಕರಿಗೆ ಲಿಖಿತ ದೂರು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ದಕ್ಷಿಣ ರೈಲ್ವೆಯ ಹಿರಿಯ ಅಧಿಕಾರಿಗಳು ಐಆರ್ಸಿಟಿಸಿ ಹಾಗೂ ದಕ್ಷಿಣ ಪಶ್ಚಿಮ ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಇದೇ ಸಂದರ್ಭ “ಈ ತಿಂಡಿಯನ್ನು ಯಾವುದಾದರೂ ಮಗು ಸೇವಿಸಿದ್ದರೆ ಏನಾಗುತ್ತಿತ್ತು?” ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿ ತನಿಖೆ ಆರಂಭಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.











