Recent Posts

Monday, July 6, 2026
ಜಿಲ್ಲೆಸುದ್ದಿ

ಮೊಬೈಲ್ ಟಾರ್ಚ್‌ ಹಿಡಿದು KKRTC ಬಸ್‌ ಚಾಲನೆ : ಮೂವರು ಅಮಾನತು -ಕಹಳೆ ನ್ಯೂಸ್

ಕಲಬುರಗಿ: ಟಾರ್ಚ್‌ ಹಿಡಿದು ಬಸ್‌ ಚಲಾಯಿಸಿದ್ದ ಕುರಿತು ʻಪಬ್ಲಿಕ್‌ ಟಿವಿʼ ನಿರಂತರ ವರದಿ ಬೆನ್ನಲ್ಲೇ KKRTC ಅಧಿಕಾರಿಗಳು ಚಾಲಕ ಸೇರಿ ಮೂವರು ಸಿಬ್ಬಂದಿಯನ್ನು ಅಮಾನತು  ಮಾಡಿದ್ದಾರೆ.

KKRTC ಬಸ್‌ ಕಲಬುರಗಿಯಿಂದ ಚಿಂಚೋಳಿಗೆ ಸಂಚರಿಸುತ್ತಿತ್ತು. ಈ ವೇಳೆ ಮೊಬೈಲ್‌ ಟಾರ್ಚ್‌ ಹಿಡಿದು ಸುಮಾರು 90 ಕಿಲೋಮೀಟರ್ ದೂರ ಬಸ್‌ ಚಲಾಯಿಸಿದ್ದರು. ಈ ಕುರಿತು ಪಬ್ಲಿಕ್‌ ಟಿವಿ ಶನಿವಾರ (ಜು.4) ರಾತ್ರಿ 11 ಗಂಟೆಗೆ ಸುದ್ದಿ ಬಿತ್ತರಿಸಿತ್ತು. ವರದಿ ಬಳಿಕ ಎಚ್ಚೆತ್ತ ಕೆಕೆಆರ್‌ಟಿಸಿ ಅಧಿಕಾರಿಗಳು ಇಲಾಖಾ ತನಿಖೆ ನಡೆಸಿದ್ದರು. ತನಿಖೆಯಲ್ಲಿ ಡಿಪೋ ಸಿಬ್ಬಂದಿ ಹಾಗೂ ಚಾಲಕನ ಅಜಾಗೃತೆ ಘಟನೆಗೆ ಕಾರಣ ಎನ್ನುವುದು ದೃಢವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತನಿಖೆಯ ವರದಿ ಬೆನ್ನಲ್ಲೇ ಅಧಿಕಾರಿಗಳು ತಾಂತ್ರಿಕ ಸಿಬ್ಬಂದಿ ಶಿವಾನಂದ್, ತಾಂತ್ರಿಕ ಮೇಲ್ವಿಚಾರಕ ಬಸವರಾಜ್ ಹಾಗು ಚಾಲಕ ಆಕಾಶ್‌ನನ್ನು ಅಮಾನತು ಮಾಡಿ, ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ?
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (KKRTC) ಸೇರಿದ ಬಸ್‌ವೊಂದು ಹೆಡ್‌ಲೈಟ್ ಇಲ್ಲದೇ ರಾತ್ರಿ ವೇಳೆ ಸಂಚರಿಸಿದ್ದು, ಕಂಡಕ್ಟರ್ ಮೊಬೈಲ್ ಟಾರ್ಚ್‌ (Mobile Torch) ಬೆಳಕಿನ ಸಹಾಯದಿಂದ ಚಾಲಕ ಬಸ್ (Bus Driver) ಚಲಾಯಿಸಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿತ್ತು. ಬಸ್‌ನ ಹೆಡ್‌ಲೈಟ್ ಕಾರ್ಯನಿರ್ವಹಿಸದಿದ್ದರೂ ಅದನ್ನು ದುರಸ್ತಿ ಮಾಡದೆ ಸಂಚಾರಕ್ಕೆ ಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕಳೆದ 15 ದಿನಗಳಿಂದ ಬಸ್‌ನ ಹೆಡ್‌ಲೈಟ್ ಕೆಟ್ಟು ಹೋಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿ ಮಾಡಿಲ್ಲ ಎನ್ನಲಾಗಿದೆ. ಇದರಿಂದ ಚಾಲಕ ಮತ್ತು ಕಂಡಕ್ಟರ್ ಮೊಬೈಲ್ ಟಾರ್ಚ್‌ ಬೆಳಕಿನ ನೆರವಿನಿಂದ ಬಸ್ ಚಲಾಯಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರಯಾಣಿಕರು ಜೀವವನ್ನು ಕೈಯಲ್ಲಿ ಹಿಡಿದು ಪ್ರಯಾಣಿಸಿದ್ದಾರೆ.

ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಾದ ಸಾರಿಗೆ ಸಂಸ್ಥೆಯೇ ಈ ರೀತಿಯ ನಿರ್ಲಕ್ಷ್ಯ ತೋರಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕೋಟ್ಯಂತರ ರೂಪಾಯಿ ಬಜೆಟ್ ಹೊಂದಿರುವ ಸರ್ಕಾರ ಮತ್ತು ಸಾರಿಗೆ ಇಲಾಖೆ, ಬಸ್‌ಗಳ ಮೂಲಭೂತ ನಿರ್ವಹಣೆಯಲ್ಲಿಯೇ ವಿಫಲವಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ರಾತ್ರಿ ವೇಳೆ ಹೆಡ್‌ಲೈಟ್ ಇಲ್ಲದ ಬಸ್ ಸಂಚಾರದಿಂದ ಯಾವುದೇ ಅನಾಹುತ ಸಂಭವಿಸಿದ್ದರೆ ಅದರ ಹೊಣೆ ಯಾರು ಹೊರುತ್ತಾರೆ ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.