Sunday, July 5, 2026
ದೆಹಲಿರಾಜ್ಯಸುದ್ದಿ

ಸೋಷಿಯಲ್‌ ಮೀಡಿಯಾ ಪ್ರೀತಿಗಾಗಿ ಗಡಿ ದಾಟಿ ಬಂದವ ಅರೆಸ್ಟ್‌; ಪಾಕಿಸ್ತಾನಕ್ಕೆ ವಾಪಸ್‌ ಕಳಿಸಿದ ಭಾರತ – ಕಹಳೆ ನ್ಯೂಸ್

ನವದೆಹಲಿ: ಸೋಷಿಯಲ್‌ ಮೀಡಿಯಾದಲ್ಲಿ ಆದ ಪ್ರೀತಿಗಾಗಿ ಪ್ರೇಯಸಿಯನ್ನು ಹುಡುಕಿಕೊಂಡು ಗಡಿ ದಾಟಿ ಭಾರತಕ್ಕೆ ಎಂಟ್ರಿ ಕೊಟ್ಟಿದ್ದ ಪಾಕಿಸ್ತಾನ  ಪ್ರಜೆಯನ್ನು ತಡೆದು ವಾಪಸ್‌ ಕಳುಹಿಸಲಾಗಿದೆ.
ಪ್ರಿಯತಮೆಗಾಗಿ ಮೇ ತಿಂಗಳಲ್ಲಿ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ನಿಯಂತ್ರಣ ರೇಖೆಯನ್ನು (LOC) ದಾಟಿದ್ದ ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ (POJK) 22 ವರ್ಷದ ಯುವಕನನ್ನು ಶನಿವಾರ ಪಾಕಿಸ್ತಾನ ಸೇನಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಮೇ 31 ರಂದು ಉರಿ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆಯನ್ನು ದಾಟುತ್ತಿದ್ದಾಗ ಪಿಒಜೆಕೆ ನಿವಾಸಿ ಜೀಶನ್‌ ಮಿರ್‌ ಎಂಬಾತನ್ನು ಬಂಧಿಸಲಾಯಿತು. ನಂತರ ಯುವಕನನ್ನು ಜು.4 ರಂದು ಮಧ್ಯಾಹ್ನ 12:24ರ ಹೊತ್ತಿಗೆ ಸ್ವದೇಶ ಪಾಕ್‌ಗೆ ವಾಪಸ್‌ ಕಳುಹಿಸಲಾಯಿತು ಎಂದು ಶ್ರೀನಗರ ಮೂಲದ ಸೇನೆಯ ಚಿನಾರ್‌ ಕಾರ್ಪ್ಸ್‌ ತನ್ನ ಎಕ್ಸ್‌ ಖಾತೆ ಪೋಸ್ಟ್‌ನಲ್ಲಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜೀವನೋಪಾಯಕ್ಕಾಗಿ ಹಣ ಸಂಪಾದಿಸಲು ಮತ್ತು ಮನೆಯ ಆರ್ಥಿಕ ಹೊರೆಗಳನ್ನು ಹೊರಲು ಮಿರ್‌ಗೆ ಕುಟುಂಬದಿಂದ ನಿರಂತರ ಒತ್ತಡ ಬರುತ್ತಿತ್ತು. ಇತ್ತ ಮಿರ್ ಬಾರಾಮುಲ್ಲಾದ ತುಲ್ವಾರಿ ಗ್ರಾಮದ ನಿವಾಸಿ ಇರುಮ್ ಬಾನೊ ಎಂಬಾಕೆ ಜೊತೆ ಸ್ನ್ಯಾಪ್‌ಚಾಟ್‌ನಲ್ಲಿ ಸಂಪರ್ಕ ಸಾಧಿಸಿದ. ಸ್ನೇಹವು ಪ್ರೀತಿಗೆ ತಿರುಗಿತು. ಈ ಸಮಯದಲ್ಲಿ, ಮಿರ್‌ನ ಪೂರ್ವಜರು ಮೂಲತಃ ಬಾನೋ ವಾಸಿಸುತ್ತಿದ್ದ ಅದೇ ಹಳ್ಳಿಯವರು ಎಂದು ತಿಳಿದುಬಂದಿದೆ. ಮಿರ್‌ ತನ್ನ ಮನೆಯ ತೊಂದರೆಗಳನ್ನು ಬಾನೋ ಜೊತೆ ಹಂಚಿಕೊಂಡ ನಂತರ, ಅವಳು ಗಡಿ ದಾಟಿ ತನ್ನ ಹಳ್ಳಿಗೆ ಬರಲು ಅವನಿಗೆ ಸೂಚಿಸಿದಳು.

ಮಿರ್ ಗಡಿ ದಾಟಿ, ನೇರವಾಗಿ ಸೈನ್ಯಕ್ಕೆ ಶರಣಾಗಬೇಕು. ದೇಶಕ್ಕೆ ಅಕ್ರಮ ಪ್ರವೇಶಕ್ಕಾಗಿ ಕಡ್ಡಾಯವಾದ ಕಾನೂನು ಶಿಕ್ಷೆಯನ್ನು ಅನುಭವಿಸಬೇಕು ಎಂದು ಇಬ್ಬರೂ ಯೋಜಿಸಿದ್ದರು. ಬಿಡುಗಡೆಯಾದ ನಂತರ, ಮಿರ್ ಹಳ್ಳಿಯಲ್ಲಿರುವ ತನ್ನ ಕುಟುಂಬದ ಪೂರ್ವಜರ ಆಸ್ತಿಯನ್ನು ಕಾನೂನುಬದ್ಧವಾಗಿ ಪಡೆದುಕೊಂಡು ನೆಲೆಸುತ್ತಾನೆ ಎಂದುಕೊಂಡಿದ್ದರು. ಮೇ ತಿಂಗಳಲ್ಲಿ ಮಿರ್ ಭಾರತೀಯ ಸೇನೆಗೆ ಸಿಕ್ಕಿಬಿದ್ದ. ವಿಚಾರಣೆಯ ನಂತರ, ಬಾನೋಳಿಗೆ ಮೀರ್ ಹೇಳಿಕೆಗಳನ್ನು ಪರಿಶೀಲಿಸಲು ಸಮನ್ಸ್ ನೀಡಲಾಯಿತು. ಅಲ್ಲಿ ಅವಳು ಮೀರ್‌ನನ್ನು ಇಲ್ಲಿಯೇ ಇರಲು ಬಿಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದಳು. ಆದರೆ, ಇದಕ್ಕೆ ಒಪ್ಪದ ಭಾರತೀಯ ಸೇನೆ, ಕಮಾನ್ ಅಮನ್ ಸೇತುದಲ್ಲಿ ಮಿರ್‌ನನ್ನು ಪಾಕಿಸ್ತಾನ ಸೇನಾ ಅಧಿಕಾರಿಗಳಿಗೆ ಔಪಚಾರಿಕವಾಗಿ ಹಸ್ತಾಂತರಿಸಲಾಗಿದೆ ಎಂದು ಸೇನೆ ತಿಳಿಸಿದೆ.