
ಬೆಂಗಳೂರು: ನಗರದ ಮೊದಲ ಟನಲ್ ರಸ್ತೆ ಕಾಮಗಾರಿಗೆ ಇಂದು ಭೂಮಿಪೂಜೆ ನೆರವೇರಲಿದೆ. ಹೆಬ್ಬಾಳದಿಂದ ಮೇಖ್ರಿ ಸರ್ಕಲ್ ವರೆಗೆ ನಿರ್ಮಾಣವಾಗುತ್ತಿರುವ ಟನಲ್ ರಸ್ತೆಗೆ ಬೆಳಗ್ಗೆ 9:30 ಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಭೂಮಿಪೂಜೆ ನೆರವೇರಿಸಲಿದ್ದಾರೆ.ಕಾರ್ಯಕ್ರಮ ಹಿನ್ನೆಲೆ ನಿನ್ನೆ ಕಾರ್ಯಕ್ರಮ ಸ್ಥಳಕ್ಕೆ ಸಾರಿಗೆ ಸಚಿವ ಬೈರತಿ ಸುರೇಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಸಚಿವ ಬೈರತಿ ಸುರೇಶ್ ಮಾತನಾಡಿ, 2.2 ಕಿ.ಮೀ ಉದ್ದದ ಟನಲ್ ರಸ್ತೆ ಕಾಮಗಾರಿಗೆ ಭಾನುವಾರ ಸಿಎಂ ಭೂಮಿ ಪೂಜೆ ಮಾಡಲಿದ್ದಾರೆ. ಇದು ಒಂದು ರೀತಿ ಪೈಲೆಟ್ ಪ್ರಾಜೆಕ್ಟ್ ಮಾದರಿ. ಅತೀ ಜರೂರಾಗಿ ಆಗುತ್ತೆ. ಈ ಕಾಮಗಾರಿಯಿಂದ ಯಲಹಂಕ, ಹೆಬ್ಬಾಳ ಬ್ಯಾಟರಾಯನಪುರಕ್ಕೆ ಹೋಗುವವರಿಗೆ ಬಹಳ ಅನುಕೂಲವಾಗುತ್ತವೆ ಎಂದು ತಿಳಿಸಿದರು.
18 ತಿಂಗಳಲ್ಲಿ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ಕಾಮಗಾರಿಗೆ 1199 ಕೋಟಿ ಮೀಸಲಿಡಲಾಗಿದೆ. ಹೈದರಾಬಾದ್ ಮೂಲದ ಖಾಸಗಿ ಕಂಪನಿ ಟೆಂಡರ್ ತೆಗೆದುಕೊಂಡಿದೆ. ಈ ಟನಲ್ ರಸ್ತೆ ಮುಗಿದರೆ, ಅರ್ಧ ಟ್ರಾಫಿಕ್ ಜಾಮ್ ಕಡಿಮೆ ಆಗುತ್ತೆ. ಕಾಮಗಾರಿ ಮಾರ್ಗದಲ್ಲಿ ಯಾವುದೇ ಆಸ್ತಿ-ಪಾಸ್ತಿಗಳಿಗೆ ತೊಂದರೆ ಇಲ್ಲದೆ ಕಾಮಗಾರಿ ಜರುಗುತ್ತೆ. ಟನಲ್ ರಸ್ತೆ ಮಾಡೋದ್ರಿಂದ ಯಾವುದೇ ರೀತಿ ಸಮಸ್ಯೆ ಆಗೋದಿಲ್ಲ. ವಿರೋಧ ಪಕ್ಷದವರು ವಿರೋಧ ಮಾಡ್ತಾರೆ. ಜನರಿಗೆ ಅನುಕೂಲ ಆಗಲಿಕ್ಕೆ ನಾವು ಈ ಕಾಮಗಾರಿ ಮಾಡ್ತಿದ್ದೇವೆ. ವಿರೋಧ ಪಕ್ಷದ ಸ್ನೇಹಿತರ ಈ ಕೆಲಸಕ್ಕೆ ಸಹಕಾರ ಕೊಡಬೇಕು ಎಂದರು.
ಮುಂದುವರೆದ ರಾಷ್ಟ್ರಗಳಲ್ಲಿ ಟನಲ್ ಮಾದರಿಯ ರಸ್ತೆಗಳೇ ಹೆಚ್ಚಾಗಿವೆ. ಟನಲ್ ರಸ್ತೆ ಕಾಮಗಾರಿಗೆ ವಿರೋಧ ಮಾಡುವ ಅವಶ್ಯಕತೆ ಇಲ್ಲ. ಸಾರ್ವಜನಿಕರಿಗೆ ಬಹಳ ಅನುಕೂಲವಾಗುವ ಯೋಜನೆ ಇದು ಎಂದು ಹೇಳಿದರು.










