
ಬಂಟ್ವಾಳ: ಡಿ.1 ರಂದು ಯುವಕ ಮಂಡಲದ ಅವರಣದಲ್ಲಿ ಯುವಕ ಮಂಡಲ ಸರಪಾಡಿ ಇದರ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಯೋಗದೊಂದಿಗೆ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾಟವು ನಡೆಯಲಿದೆ ಎಂದು ಯುವಕ ಮಂಡಲದ ಗೌರವ ಸಲಹೆಗಾರ ಸರಪಾಡಿ ಆಶೋಕ ಶೆಟ್ಟಿ ತಿಳಿಸಿದ್ದಾರೆ.
ಶುಕ್ರವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ವೇಳೆ ಸುಸಜ್ಜಿತ ಅಡುಗೆ ಕೋಣೆಯ ಉದ್ಘಾಟನೆ ಹಾಗೂ ದಿ.ಪಟ್ಲಕೆರೆ ನಾರಾಯಣಶಾಂತಿ ಅವರ ಸ್ಮರಣಾರ್ಥ ಸಭಾಂಗಣಕ್ಕೆ ಶಿಲಾನ್ಯಾಸವನ್ನು ನೆರವೇರಿಸಲಾಗುವುದು ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಲಿದ್ದು,ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಸರಪಾಡಿ ಗ್ರಾಪಂ ಅಧ್ಯಕ್ಷೆ ಲೀಲಾವತಿ,ಮಾಜಿ ಸಚಿವ ನಾಗರಾಜ ಶೆಟ್ಟಿ ಮೊದಲಾದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭ ಸಂಘದ ಏಳಿಗೆಗೆ ಶ್ರಮಿಸಿದ ಮಾಜಿ ಕಾರ್ಯದರ್ಶಿ,ಹಿರಿಯರಾದ ಜಾರಪ್ಪ ಶೆಟ್ಟಿ ಖಂಡಿಗ ಅವರನ್ನು ಸನ್ಮಾನಿಸಲಾಗುವುದು ಮತ್ತು ನಟ ರವಿ ಸಾಲಿಯಾನ್, ರಾಷ್ಟ್ರಮಟ್ಟದ ಕಬಡ್ಡಿ ಪಟು ಸುಶ್ಮಿತಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.
ಈ ಪಂದ್ಯಾಟದಲ್ಲಿ ಅಮೆಚೂರು ಎಸೋಸಿಯೇಶನ್ ನಲ್ಲಿ ನೋಂದಾಯಿಸಲ್ಪಟ್ಟ ಬಲಿಷ್ಠ 24 ತಂಡಗಳು ಭಾಗವಹಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯುವಕ ಮಂಡಲದ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ, ಪ್ರಕಾಶ್ಚಂದ್ರ ಆಳ್ವ,ಕಿಶನ್ ಸರಪಾಡಿ ಉಪಸ್ಥಿತರಿದ್ದರು.









