ವಿವೇಕಾನಂದ ಕಾಲೇಜಿನಲ್ಲಿ ‘ನೂತನ ಪರೀಕ್ಷಾ ಸಾಪ್ಟ್ವೇರ್’ ಕುರಿತು ಕಾರ್ಯಗಾರ, ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ತೊಂದರೆಯಾಗಬಾರದು; ಡಾ. ಪಿ. ಎಲ್. ಧರ್ಮ-ಕಹಳೆ ನ್ಯೂಸ್

ಪುತ್ತೂರು : ವಿದ್ಯಾ ಸಂಸ್ಥೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಮಂಗಳೂರು ವಿಶ್ವವಿದ್ಯಾಲಯದ ಬೆಳವಣಿಗೆಗೆ ಕಾರಣವಾಗಿದೆ. ಕಾಲೇಜಿನಲ್ಲಿ ಪರೀಕ್ಷಾ ವಿಚಾರದಲ್ಲಿ ಏನೇ ತೊಂದರೆ ಆದರೂ ಅದು ಪರೀಕ್ಷಾಂಗವನ್ನು ತಲುಪುತ್ತದೆ.

ವಿದ್ಯಾರ್ಥಿಗಳ ಪಲಿತಾಂಶ ಪ್ರಕಟಣೆಯಲ್ಲಿ ಈ ಹಿಂದೆ ಲೋಪದೋಷಗಳಿಂದಾಗಿ ತೊಂದರೆಯಾಗಿದೆ. ಅನೇಕ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಅನ್ನುವ ಪಲಿತಾಂಶವು ಬಂದಿದೆ. ಇದನ್ನೆಲ್ಲಾ ಸರಿಪಡಿಸುವ ಸಲುವಾಗಿ ಪರೀಕ್ಷಾಂಗ ಮಂಡಳಿ ಹೊಸ ಪ್ರಯೋಗವನ್ನು ಮಾಡುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಪಿ.ಎಲ್. ಧರ್ಮ ನುಡಿದರು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಐಕ್ಯೂಎಸಿ ಘಟಕ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಮಂಡಳಿಯ ಜಂಟಿ ಆಶ್ರಯದಲ್ಲಿ ನಡೆದ ‘ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗ ಅಳವಡಿಸುವ ನೂತನ ಪರೀಕ್ಷಾ ಸ್ವಾಪ್ಟ್ವೇರ್ ಕುರಿತಾದ ಕಾರ್ಯಗಾರ’ವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಕೊರೋನದಂತಹ ಸಂದಿಗ್ಧ ಪರಿಸ್ಥಿತಿ ಶಿಕ್ಷಣ ಕ್ಷೇತ್ರದಲ್ಲಿ ಅಗಾಧವಾದ ಪರಿಣಾಮವನ್ನು ಬೀರಿದೆ. ಕೊರೋನವು ನಮ್ಮ ನಡವಳಿಕೆ ಬದಲಾಗಬೇಕು. ಜೊತೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಬದಲಾವಣೆಯಾಗಬೇಕೆನ್ನುವ ಪಾಠವನ್ನು ಕಲಿಸಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಪರೀಕ್ಷೆ ಬರಿಯುವ ಸಂದರ್ಭದಲ್ಲಿ ಕೊಠಡಿ ನಿರೀಕ್ಷಕರು ಗಮನವಿಡಬೇಕು. ವಿದ್ಯಾರ್ಥಿಗಳು ಬರಿಯುವಾಗ ತಪ್ಪು ಮಾಡಿದರೆ ತಿಳಿಹೇಳಬೇಕು. ಪರೀಕ್ಷಾ ಸಂದರ್ಭ ಯಾವುದೇ ರೀತಿಯ ನಿರ್ಲಕ್ಷ್ಯ ತೋರಬಾರದು. ಇದು ವಿದ್ಯಾರ್ಥಿಯ ಭವಿಷ್ಯವನ್ನು ಹಾಳುಗೆಡಬಹುದು. ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ತೊಂದರೆಯಾಗಬಾರದೆಂದು ಪರೀಕ್ಷಾ ಮಂಡಳಿ ಹೊಸ ಸಾಪ್ಟ್ವೇರನ್ನು ಪರಿಚಯಿಸಿದೆ ಎಂದರು. ವಿವಿಧ ಕಾಲೇಜುಗಳಿಂದ ಆಗಮಿಸಿದ ಉಪನ್ಯಾಸಕರಿಗೆ ಪರೀಕ್ಷಾ ಮಂಡಳಿ ಕುಲಸಚಿವ ಡಾ.ಪಿ.ಎಲ್. ಧರ್ಮ ಮತ್ತು ಮಂಡಳಿಯ ಸದಸ್ಯ ಹರೀಶ್ ಶೆಟ್ಟಿ ‘ನೂತನ ಪರೀಕ್ಷಾ ಸಾಪ್ಟ್ವೇರ್’ ಕುರಿತಾಗಿ ತರಬೇತಿ ನೀಡಿದರು. ಈ ಸಂದರ್ಭ ಪರೀಕ್ಷಾ ಮಂಡಳಿಯ ಸದಸ್ಯರಾದ, ಹರೀಶ್ ಶೆಟ್ಟಿ, ಪ್ರೊ. ಸಂಗಪ್ಪ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು. ಐಕ್ಯೂಎಸಿ ಸಂಯೋಜಕ ಶಿವಪ್ರಸಾದ್ ಕೆ. ಸಿ. ವಂದಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್. ನಿರೂಪಿಸಿದರು.









