
ಸುಳ್ಯ : ನೆಹರು ಮೆಮೋರಿಯಲ್ ಕಾಲೇಜು ಸುಳ್ಯದಲ್ಲಿ ವಿದ್ಯಾರ್ಥಿನಿಯರಿಗಾಗಿ ಮಹೀಂದ್ರಾ & ಮಹೀಂದ್ರಾ ಸಂಸ್ಥೆಯ ಉಪಕ್ರಮವಾದ ನಾಂದಿ ಫೌಂಡೇಶನ್ನ ಮಹೀಂದ್ರಾ ಪ್ರೈಡ್ ಕ್ಲಾಸ್ರೂಮ್ (MPC) ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಒಂದು ವಾರದ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಸಂಪನ್ನಗೊಂಡಿತು.
ಆಗಸ್ಟ್ 31 ರಿಂದ ಸೆಪ್ಟೆಂಬರ್ 5 ರವರೆಗೆ ಎರಡು ಬ್ಯಾಚ್ಗಳಲ್ಲಿ ನಡೆದ ಈ ತರಬೇತಿಯ ಪ್ರಯೋಜನವನ್ನು ಬಿಸಿಎ, ಬಿಎಸ್ಸಿ, ಬಿಕಾಂ, ಬಿಬಿಎ ಮತ್ತು ಬಿಎ ವಿಭಾಗಗಳ 95 ವಿದ್ಯಾರ್ಥಿನಿಯರು ಪಡೆದುಕೊಂಡರು. ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ತರಬೇತಿಯಲ್ಲಿ ಸಂವಹನ ಕೌಶಲ್ಯ, ರೆಸ್ಯೂಮ್ ತಯಾರಿ, ಸಂದರ್ಶನ ಕೌಶಲ್ಯಗಳು, ಡಿಜಿಟಲ್ ಸಾಕ್ಷರತೆ, ಕಾರ್ಯಸ್ಥಳ ಸನ್ನದ್ಧತೆ ಮತ್ತು ವ್ಯಕ್ತಿತ್ವ ವಿಕಸನದ ಕುರಿತು ಸಂವಾದಾತ್ಮಕ ಚಟುವಟಿಕೆಗಳು, ಗುಂಪು ಚರ್ಚೆ ಮತ್ತು ಅಣಕು ಸಂದರ್ಶನಗಳ ಮೂಲಕ ವೃತ್ತಿಗೆ ಸನ್ನದ್ದರಾಗಿಸಲು ತರಬೇತಿ ನೀಡಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ. ವಹಿಸಿದ್ದರು. ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿನಿಯರನ್ನು ಸಬಲೀಕರಣಗೊಳಿಸುವ ನಾಂದಿ ಫೌಂಡೇಶನ್ನ ಪ್ರಯತ್ನವನ್ನು ಶ್ಲಾಘಿಸಿದರು ಹಾಗೂ ಕಲಿತ ಕೌಶಲ್ಯಗಳನ್ನು ಭವಿಷ್ಯದ ವೃತ್ತಿಜೀವನಕ್ಕೆ ಬಳಸಿಕೊಳ್ಳುವಂತೆ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ನಾಂದಿ ಫೌಂಡೇಶನ್ನ ಸಾಫ್ಟ್ ಸ್ಕಿಲ್ಸ್ ತರಬೇತುದಾರರಾದ ಡಾ. ಮಾಳವಿಕಾ ನಾಯಕ್ ಮತ್ತು ಸಿದ್ಧಾರ್ಥ ಪ್ರಕಾಶ್ ಪಡಗಟ್ಟಿ ಅವರನ್ನು ಸೇವೆಗಾಗಿ ಸನ್ಮಾನಿಸಲಾಯಿತು. ವಿದ್ಯಾರ್ಥಿನಿಯರು ತಮ್ಮ ಅನುಭವಗಳನ್ನು ಹಂಚಿಕೊಂಡು, ಈ ತರಬೇತಿಯು ತಮ್ಮ ಆತ್ಮವಿಶ್ವಾಸ ಮತ್ತು ಉದ್ಯೋಗ ಸನ್ನದ್ಧತೆಯನ್ನು ಹೆಚ್ಚಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಕಾಲೇಜಿನ ಐ ಕ್ಯೂ ಎ ಸಿ ಸಂಯೋಜಕಿ ಡಾ. ಮಮತಾ ಕೆ, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಶ್ರೀಧರ್ ವಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ ಘಟಕದ ಸಂಯೋಜಕಿ ಪ್ರೊ. ಅನಂತಲಕ್ಷ್ಮಿ ಮತ್ತು ಉಪನ್ಯಾಸಕರಾದ ದಿವ್ಯಾ ಟಿ ಎಸ್, ಕುಲದೀಪ್ ಪೆಲ್ತಡ್ಕ, ವಿಷ್ಣುಪ್ರಶಾಂತ್ ಬಿ, ಕೃತಿಕಾ ಕೆ ಜೆ, ದೀಕ್ಷಾ ಎಂ ಡಿ, ಜಿತೇಶ್ ಜಿ ಎಚ್ ಹಾಗೂ ಲಾವಣ್ಯ ಸಂಯೋಜಿಸಿದ್ದರು. ಕಾಲೇಜಿನ ಎಲ್ಲಾ ವಿಭಾಗಗಳ ಅಂತಿಮ ವರ್ಷದ ವಿದ್ಯಾರ್ಥಿನಿಯರು ಕಾರ್ಯಕ್ರಮದ ಸಂಪೂರ್ಣ ಪ್ರಯೋಜನ ಪಡೆದುಕೊಂಡರು.











