ಅಮರನಾಥ ಯಾತ್ರಿಕರ ಬಸ್ ಅಪಘಾತ : ಸಿಂಧ್ ನದಿಗೆ ಬೀಳುತ್ತಿದ್ದ ವಾಹನ ಅದೃಷ್ಟವಶಾತ್ ಪಾರು, 39 ಜನರಿಗೆ ಗಾಯ-ಕಹಳೆ ನ್ಯೂಸ್

ಶ್ರೀನಗರ: ಅಮರನಾಥ ಯಾತ್ರಿಕರಿದ್ದ ಬಸ್ವೊಂದು ತಿರುವಿನಲ್ಲಿ ಅಪಘಾತಕ್ಕೀಡಾಗಿ 39 ಜನರು ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಕಂಗನ್ ಪ್ರದೇಶದಲ್ಲಿ ನಡೆದಿದೆ.
ಅಮರನಾಥ ಯಾತ್ರೆ ಮುಗಿಸಿ ಯಾತ್ರಾರ್ಥಿಗಳು ಬಸ್ಸಿನಲ್ಲಿ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಹರಿಗನ್ವಾನ್ನಲ್ಲಿ ರಸ್ತೆಯ ತಿರುವಿನಲ್ಲಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ಪರಿಣಾಮ ಬಸ್ ರಸ್ತೆಯಿಂದ ಜಾರಿ ಪಕ್ಕದ ಮನೆಯ ಮೇಲೆ ಬಿದ್ದಿದೆ. ಬಸ್ ಬಿದ್ದ ಪರಿಣಾಮ ಮನೆಗೆ ತೀವ್ರ ಹಾನಿಯಾಗಿದೆ. ಆದರೆ ಸಿಂಧ್ ನದಿಗೆ ಬೀಳಬೇಕಿದ್ದ ಬಸ್ನ್ನು ಮನೆ ತಡೆಹಿಡಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೂಡಲೇ ಸ್ಥಳೀಯ ನಿವಾಸಿಗಳು, ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್, ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಭಾರತೀಯ ಸೇನೆ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾತ್ರಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಸ್ಕೆಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಗಂದರ್ಬಾಲ್ ಡೆಪ್ಯೂಟಿ ಕಮಿಷನರ್ ಹಾಗೂ ಆರೋಗ್ಯ ಅಧಿಕಾರಿಗಳೊಂದಿಗೆ ಮಾತನಾಡಿ ಯಾತ್ರಿಕರ ಆರೋಗ್ಯ ವಿಚಾರಿಸಿದ್ದು, ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ.
ಜುಲೈ 2ರಂದು ಪ್ರಾರಂಭವಾದ 57 ದಿನಗಳ ವಾರ್ಷಿಕ ಅಮರನಾಥ ಯಾತ್ರೆಯು ಆಗಸ್ಟ್ 28 ರಂದು ಮುಕ್ತಾಯಗೊಳ್ಳಲಿದ್ದು, ಇಲ್ಲಿವರೆಗೆ 4.15 ಲಕ್ಷಕ್ಕೂ ಅಧಿಕ ಯಾತ್ರಿಕರು ಹಿಮಲಿಂಗದ ದರ್ಶನ ಪಡೆದಿದ್ದಾರೆ.











