
ರಾಯಚೂರು: ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದಿರುವ ಬಳ್ಳಾರಿ ಚಲೋ ಪಾದಯಾತ್ರೆಗೆ ಎರಡನೇ ದಿನವೂ ಕಾರ್ಯಕರ್ತರ ದಂಡು ಹರಿದು ಬರುತ್ತಿದೆ.
ಎರಡನೇ ದಿನ ಸಂತೆಕೆಲ್ಲೂರಿನ ಘನಮಠೇಶ್ವರ ಮಠದಿಂದ ಗುಡದೂರಿಗೆ 21 ಕಿ.ಮೀ ಪಾದಯಾತ್ರೆ ನಡೆಯಲಿದ್ದು ಪಾದಯಾತ್ರೆಯಲ್ಲಿ ಹಲವಾರು ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಮಸ್ಕಿ, ಮಾನ್ವಿ, ಹುನಗುಂದ, ಕುಷ್ಟಗಿ, ಲಿಂಗಸುಗೂರು, ಮುದ್ದೇಬಿಹಾಳ ಕಾರ್ಯಕರ್ತರು ಇಂದು ಸೇರಲಿದ್ದಾರೆ. ಸಂತೆಕೆಲ್ಲೂರಿನಿಂದ ಮುದಬಾಳ ಕ್ರಾಸ್ ವರೆಗೆ ಪಾದಯಾತ್ರೆ ನಡೆದು ಮಧ್ಯಾಹ್ನ ಊಟದ ವಿರಾಮ ಮಾಡಲಾಗುವುದು. ಈ ವೇಳೆ ಮಧ್ಯಾಹ್ನ 2 ಕ್ಕೆ ಮುದಬಾಳ ಕ್ರಾಸ್ ಬಳಿ ದಲಿತ ಮುಖಂಡರ ಜೊತೆ ಬಿ.ವೈ.ವಿಜಯೇಂದ್ರ ಸಂವಾದ ನಡೆಸಲಿದ್ದಾರೆ.
ಮಧ್ಯಾಹ್ನ ಬಳಿಕ ಮುದಬಾಳ ಕ್ರಾಸ್ನಿಂದ ಗುಡದೂರು ವರೆಗೆ ಪಾದಯಾತ್ರೆ ಮುಂದುವರೆಯಲಿದೆ. ಪಾದಯಾತ್ರೆ ವೇಳೆ 10,000 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಇಂದು ಭಾಗವಹಿಸುವ ನಿರೀಕ್ಷೆ ಇದೆ. ಸಂಜೆ ಮಸ್ಕಿ ಕ್ಷೇತ್ರದ ಗುಡದೂರಿನಲ್ಲಿ 2ನೇ ದಿನದ ಪಾದಯಾತ್ರೆ ಅಂತ್ಯವಾಗಲಿದೆ. ಪಾದಯಾತ್ರೆಯುದ್ದಕ್ಕೂ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.











