
ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಕೆ.ಪಿ ಕಾಲರ್ -2 ಪುಂಡಾಟ ಮಿತಿ ಮೀರಿದೆ. ಜನರಿಗೆ ಉಪಟಳ ಕೊಡುತ್ತಿರುವ ಕಾಡಾನೆ ಸೆರೆಗೆ ಮತ್ತಿಗೋಡು, ದುಬಾರೆ ಕ್ಯಾಂಪ್ನಿಂದ ಕುಮ್ಕಿ ಆನೆಗಳ ತಂಡ ಆಗಮಿಸಿದೆ.
ಕಾರ್ಯಾಚರಣೆಗೆ ದುಬಾರೆ ಶಿಬಿರದಿಂದ ಐದು, ನಾಗರಹೊಳೆ ಶಿಬಿರದಿಂದ ಒಂದು ಕಾಡಾನೆ ಸೇರಿ ಆರು ಸಾಕಾನೆಗಳು ಬಂದಿವೆ. ಕುಮ್ಕಿ ಆನೆಗಳಾದ ಏಕಲವ್ಯ, ಧನಂಜಯ, ಲಕ್ಷ್ಮಣ, ಪ್ರಶಾಂತ, ಈಶ್ವರ, ಅಜ್ಜಯ್ಯ ಆನೆಗಳು ಆಗಮಿಸಿವೆ. ಬೇಲೂರು ತಾಲೂಕಿನ ಚಿಕ್ಕೋಲೆ ಬಳಿಯಿರುವ ತಾತ್ಕಾಲಿಕ ಕ್ಯಾಂಪ್ನಲ್ಲಿ ಆನೆಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆರು ಸಾಕಾನೆಗಳಿಗೆ ಡಿಎಫ್ಓ ಸೌರಭ್ಕುಮಾರ್ ಪೂಜೆ ಸಲ್ಲಿಸಿದ್ದಾರೆ.
ಎರಡು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಹಾಗೂ ಕೆ.ಪಿ. ಕಾಲರ್-2 ಹೆಸರಿನ ಕಾಡಾನೆ ಸೆರೆಗೆ ಸರ್ಕಾರ ಅನುಮತಿ ನೀಡಿತ್ತು. ಅದರಂತೆ 2 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ, ಒಂದನ್ನು ಸೆರೆಹಿಡಿದು ಸ್ಥಳಾಂತರಿಸಲು ಇಟಿಎಫ್ ಸಿಬ್ಬಂದಿ ನಿರ್ಧರಿಸಿದ್ದಾರೆ. ಕೆ.ಪಿ ಕಾಲರ್ -2 ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಿ ಜನರಲ್ಲಿ ಭಯ ಹುಟ್ಟಿಸಿದೆ. ಮನೆಗಳ ಬಳಿ ಬಂದು ವಾಹನಗಳ ಮೇಲೆ ದಾಳಿ ಮಾಡುತ್ತಿದೆ. ಇದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.











