
ಬೆಂಗಳೂರು: ನಟ ದರ್ಶನ್ ಅವರ ಪುತ್ರ ವಿನೀಶ್ ಪ್ರಯಾಣಿಸುತ್ತಿದ್ದ ಕಾರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿಸಣ್ಣ ರಸ್ತೆ ಅಪಘಾತಕ್ಕೆ ಈಡಾಗಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಅವರ ತಾಯಿ ವಿಜಯಲಕ್ಷ್ಮಿ ದರ್ಶನ್ ಸ್ಪಷ್ಟೀಕರಣ ನೀಡಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ KA 01 MU 9969 ನಂಬರ್ನ ಫೋರ್ಡ್ ಎಂಡೋವರ್ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ನಡೆದಿತ್ತು. ರಸ್ತೆಯಲ್ಲಿ ಹೋಗುತ್ತಿದ್ದಾಗ ಏಕಾಏಕಿ ದ್ವಿಚಕ್ರ ವಾಹನಕ್ಕೆ ಕಾರು ತಗುಲಿದ್ದು, ಘಟನಾ ಸ್ಥಳದಲ್ಲಿ ವಿನೀಶ್ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿರುವ ವಿಡಿಯೋಗಳು ಹರಿದಾಡಿದ್ದವು. ವಿನೀಶ್ ಅವರಿಗೆ ಅಪಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟೇ ಅಲ್ಲದೇ ವಿನೇಶ್ ಅವರೇ ಕಾರನ್ನು ಚಲಾಯಿಸಿದ್ದರು ಎಂಬ ಸುದ್ದಿಗಳೂ ಹರಿದಾಡಿದ್ದವು.
ವಿಜಯಲಕ್ಷ್ಮಿ ದರ್ಶನ್ ಹೇಳಿದ್ದೇನು?
ವಿನೀಶ್ ಅವರಿಗೆ ಅಪಘಾತವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು. ಅವರು ಸುರಕ್ಷಿತವಾಗಿದ್ದಾರೆ ಮತ್ತು ಆರಾಮಾಗಿದ್ದಾರೆ.
ಘಟನೆ ನಡೆದಾಗ ವಿನೀಶ್ ಕಾರು ಚಲಾಯಿಸುತ್ತಿರಲಿಲ್ಲ. ಎಂದಿನಂತೆ ಕುಟುಂಬದ ಚಾಲಕನೇ ವಾಹನವನ್ನು ಚಲಾಯಿಸುತ್ತಿದ್ದರು. ಬೆಂಗಳೂರಿನ ಟ್ರಾಫಿಕ್ನಲ್ಲಿ ಸಾಮಾನ್ಯ ಎನ್ನಿಸುವಂತಹ ಒಂದು ಸಣ್ಣ ರಸ್ತೆ ಘಟನೆ ಇದಾಗಿದೆ.
ಘಟನೆಯಲ್ಲಿ ಭಾಗಿಯಾಗಿದ್ದ ಬೈಕ್ ಸವಾರರು ತಪ್ಪು ತಮ್ಮದೇ ಎಂದು ಒಪ್ಪಿಕೊಂಡು, ಸ್ಥಳದಲ್ಲೇ ಕ್ಷಮೆಯನ್ನೂ ಕೇಳಿದ್ದಾರೆ. ಬೈಕ್ನಲ್ಲಿದ್ದ ಜನರು ಸುರಕ್ಷಿತವಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ವಿನೀಶ್ ಕಾರಿನಿಂದ ಕೆಳಗಿಳಿದಿದ್ದರು. ಆದರೆ ಆ ಕೆಲವು ಕ್ಷಣಗಳ ದೃಶ್ಯಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸದೆ, ಸಂಪೂರ್ಣವಾಗಿ ತಪ್ಪುದಾರಿಗೆಳೆಯುವ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ.
ಒಂದು ಕುಟುಂಬವಾಗಿ ನಾವು ಈಗಾಗಲೇ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ. ಇಂತಹ ಪರಿಶೀಲಿಸದ ಮತ್ತು ಉತ್ತೇಜನಕಾರಿ ಸುದ್ದಿಗಳ ಹರಡುವಿಕೆಯು ನಮ್ಮ ನೋವು ಮತ್ತು ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮಾಧ್ಯಮ ಸಂಸ್ಥೆಗಳು ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗಿ ವಿನಂತಿಸುತ್ತೇವೆ ಮತ್ತು ಇಂತಹ ಸುಳ್ಳು ವರದಿಗಳನ್ನು ಯಾರೂ ನಂಬಬೇಡಿ ಅಥವಾ ಹಂಚಿಕೊಳ್ಳಬೇಡಿ ಎಂದು ವಿಜಯಲಕ್ಷ್ಮಿ ದರ್ಶನ್ ಮನವಿ ಮಾಡಿದ್ದಾರೆ.











