
ಭಾರತದ ಮೊದಲ ಆದಿವಾಸಿ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜೀವನ ಕಥೆ ಇದೀಗ ಡಾಕ್ಯುಮೆಂಟರಿಯಾಗಿ ಮೂಡಿಬರಲಿದೆ. ಈ ವಿಶೇಷ ಯೋಜನೆಯನ್ನು ಬಾಲಿವುಡ್ ನಟ ಆಮೀರ್ ಖಾನ್ ನಿರ್ಮಾಣ ಮಾಡಲಿದ್ದಾರೆ.
ಆಮೀರ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಡಾಕ್ಯುಮೆಂಟರಿ ನಿರ್ಮಾಣವಾಗಲಿದೆ. ಖ್ಯಾತ ಲೇಖಕಿ ಮತ್ತು ನಿರ್ದೇಶಕಿ ಸ್ವಾತಿ ಚಕ್ರವರ್ತಿ ಭಟ್ಕಲ್ ಈ ಯೋಜನೆಗೆ ನಿರ್ದೇಶನ ಮಾಡಲಿದ್ದಾರೆ. ದ್ರೌಪದಿ ಮುರ್ಮು ಅವರು ಭಾರತದ ಮೊದಲ ಆದಿವಾಸಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಕೂಡ ಆಗಿದ್ದಾರೆ. ಹೀಗಾಗಿ ಅವರ ಜೀವನ ಪಯಣವನ್ನು ತೆರೆಗೆ ತರುವ ಪ್ರಯತ್ನಕ್ಕೆ ಮಹತ್ವ ಸಿಕ್ಕಿದೆ.
ಡಾಕ್ಯುಮೆಂಟರಿಯಲ್ಲಿ ಒಡಿಶಾದ ಸಣ್ಣ ಹಳ್ಳಿಯೊಂದರಲ್ಲಿ ಬೆಳೆದ ಬಾಲಕಿಯಿಂದ ರಾಷ್ಟ್ರಪತಿ ಹುದ್ದೆಯವರೆಗೆ ಅವರ ಪಯಣವನ್ನು ತೋರಿಸಲಾಗುತ್ತದೆ. ರಾಜಕೀಯ ಸಾಧನೆಗಳಿಗಿಂತ ಹೆಚ್ಚಾಗಿ ಅವರ ಜೀವನದ ಹೋರಾಟ, ಸವಾಲುಗಳು, ವೈಯಕ್ತಿಕ ನೋವುಗಳು ಮತ್ತು ಸಾಧನೆಗಳ ಮೇಲೆ ಬೆಳಕು ಚೆಲ್ಲಲಾಗುತ್ತದೆ. ಅವರ ಬಾಲ್ಯದ ಕೆಲವು ಘಟನೆಗಳನ್ನು ಮರುಸೃಷ್ಟಿಸಲು ಒಡಿಶಾದಲ್ಲಿರುವ ಅವರ ಹುಟ್ಟೂರಿನಲ್ಲೇ ಚಿತ್ರೀಕರಣ ನಡೆಸಲಾಗಿದೆ. ಸ್ಥಳೀಯ ನಿವಾಸಿಗಳು ಮತ್ತು ಕಲಾವಿದರು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.









