Wednesday, May 27, 2026
ಸುದ್ದಿ

CMRL ಅಕ್ರಮ ಹಣ ವರ್ಗಾವಣೆ ಪ್ರಕರಣ : ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ಮನೆ ಮೇಲೆ ಇ.ಡಿ ದಾಳಿ-ಕಹಳೆ ನ್ಯೂಸ್

ತಿರುವನಂತಪುರ: ಸಿಎಂಆರ್‌ಎಲ್ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ (ED), ಬುಧವಾರ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿವಾಸ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದೆ.

ಬೆಂಗಳೂರಿನಲ್ಲಿರುವ ಪಿಣರಾಯಿ ವಿಜಯನ್ ಪುತ್ರಿ ಟಿ.ವೀಣಾ ಒಡೆತನದ ಎಕ್ಸಾಲಾಜಿಕ್ ಸೊಲ್ಯೂಷನ್ಸ್ (Exalogic Solutions) ಹೆಸರಿನ ಐಟಿ ಕಂಪನಿ, ವೀಣಾ ನಿವಾಸ ಸೇರಿದಂತೆ ಬೆಂಗಳೂರಿನ 3 ಕಡೆ ಇ.ಡಿ ದಾಳಿ ನಡೆಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ತಿರುವನಂತಪುರದಲ್ಲಿರುವ ಪಿಣರಾಯಿ ವಿಜಯನ್ ಅವರ ಬಾಡಿಗೆ ನಿವಾಸವೂ ಸೇರಿದಂತೆ ಕೇರಳದ ಒಟ್ಟು 10 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದೆ ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ಅಕ್ರಮ ಹಣ ವರ್ಗಾವಣೆ ಸಂಬಂಧ ಸರಿಯಾದ ತನಿಖೆ ನಡೆಸುವಂತೆ ಬಿಜೆಪಿ ಒತ್ತಾಯಿಸಿತ್ತು.
ಏನಿದು ಪ್ರಕರಣ?
ಸಿಎಂಆರ್‌ಎಲ್ ಸಂಸ್ಥೆಯಿಂದ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಮಾಲೀಕತ್ವದ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಕಂಪನಿಗೆ ನೀಡಲಾಗಿದೆ ಎನ್ನಲಾದ 1.72 ಕೋಟಿ ಪಾವತಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. 2018ರಿಂದ 2019ರ ಅವಧಿಯಲ್ಲಿ ಯಾವುದೇ ಸೇವೆ ಒದಗಿಸದಿದ್ದರೂ ಸಿಎಂಆರ್‌ಎಲ್ ಸಂಸ್ಥೆ ಎಕ್ಸಾಲಾಜಿಕ್ ಸೊಲ್ಯೂಷನ್ಸ್‌ಗೆ ಅಕ್ರಮವಾಗಿ ರೂ.1.72 ಕೋಟಿ ಪಾವತಿಸಿದೆ ಎಂಬ ಆರೋಪ ಕೇಳಿಬಂದಿದೆ.
ಟಿ.ವೀಣಾ ಒಡೆತನದ ಎಕ್ಸಲಾಜಿಕ್ ಕಂಪನಿಯು ಸಿಎಂಆರ್‌ಎಲ್‌ನಿಂದ ಪ್ರತಿ ತಿಂಗಳ ಪಾವತಿಯಾಗಿ ಯಾವುದೇ ಸೇವೆ ನೀಡದೇ ಕೋಟ್ಯಂತರ ರೂಪಾಯಿ ಪಡೆದ ಆರೋಪಗಳು ಕೇಳಿ ಬಂದ ಕಾರಣ, ಕೇಂದ್ರ ಸರ್ಕಾರ 2024ರಲ್ಲಿ ವಿಸ್ತೃತ ತನಿಖೆಗೆ ಆದೇಶ ನೀಡಿತ್ತು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಎಕ್ಸಲಾಜಿಕ್ ಕಂಪನಿ ವಿರುದ್ಧ ತನಿಖೆಗೆ ಆದೇಶಿಸಿತ್ತು. ಉನ್ನತ ಮಟ್ಟದ ಮೂವರು ಸದಸ್ಯರ ತಂಡ ತನಿಖೆಯ ಉಸ್ತುವಾರಿ ವಹಿಸಿತ್ತು.
ಸಿಎಂಆರ್‌ಎಲ್ ಮತ್ತು ಕೆಎಸ್‌ಐಡಿಸಿ ಎರಡಕ್ಕೂ ತಮ್ಮ ಪಾಲನ್ನು ಸ್ಪಷ್ಟಪಡಿಸಲು ಮೊದಲೇ ನೋಟಿಸ್ ನೀಡಲಾಗಿತ್ತು. ಮಾಸಿಕ ಪಾವತಿ ವಿವಾದದ ಆರೋಪಗಳಿಗೆ ಸಿಎಂಆರ್‌ಎಲ್ ಅಸ್ಪಷ್ಟ ಉತ್ತರ ನೀಡಿದ್ದು, ಕೆಎಸ್‌ಐಡಿಸಿ ಯಾವುದೇ ಉತ್ತರ ನೀಡಿರಲಿಲ್ಲ. ಇದಾದ ನಂತರ ಎಕ್ಸಲಾಜಿಕ್, ಸಿಎಂಆರ್‌ಎಲ್ ಮತ್ತು ಕೆಎಸ್‌ಐಡಿಸಿ ಕಂಪನಿಗಳ ವಹಿವಾಟಿನ ಬಗ್ಗೆ ವಿವರವಾಗಿ ತನಿಖೆಗೆ ಕ್ರಮ ಕೈಗೊಳ್ಳಲಾಗಿತ್ತು. ಈ ಕುರಿತು ಇ.ಡಿ ತನಿಖೆ ಆರಂಭಿಸಿತ್ತು.
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಇ.ಡಿ ಕ್ರಮ:
ಇ.ಡಿ ತನಿಖೆಯನ್ನು ರದ್ದುಗೊಳಿಸುವಂತೆ ಸಿಎಂಆರ್‌ಎಲ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿತ್ತು. ನ್ಯಾಯಾಲಯದ ಈ ನಿರ್ಧಾರದಿಂದ ತನಿಖೆಗೆ ಮತ್ತಷ್ಟು ವೇಗ ಸಿಕ್ಕಿದ್ದು, ಇ.ಡಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು