ನಡುರಸ್ತೆಯಲ್ಲಿ ಎಣ್ಣೆ ಪಾರ್ಟಿ : ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪುಂಡರು – ಕಹಳೆ ನ್ಯೂಸ್

ಬೆಂಗಳೂರು: ನಡುರಸ್ತೆಯಲ್ಲೇ ಎಣ್ಣೆ ಪಾರ್ಟಿ ಮಾಡುತ್ತಿದ್ದ ಪುಂಡರನ್ನ ಪ್ರಶ್ನಿಸಿದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ನಗರದ ಅಮೃತಹಳ್ಳಿಯಲ್ಲಿ ನಡೆದಿದೆ.
ಹಲ್ಲೆ ಮಾಡಿದ ನಾಲ್ವರಲ್ಲಿ, ಹರ್ಷ ಮತ್ತು ಆರ್ಯನ್ ಎಂಬ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಂತರರಾಜ್ಯ ಬೈಕ್ ಕಳ್ಳರ ಜಾಲ ಭೇದಿಸಿದ ಹೊಸಕೋಟೆ ಪೊಲೀಸರು – 50 ದ್ವಿಚಕ್ರ ವಾಹನಗಳು ಸೀಜ್
ಮೇ 1 ರಂದು ಮುಂಜಾನೆ 3 ಗಂಟೆಯ ವೇಳೆಗೆ ಅಮೃತಹಳ್ಳಿಯ ಆಕಾಶವಾಣಿ ಲೇಔಟ್ನಲ್ಲಿ ನಾಲ್ವರು ಯುವಕರು ಕಾರನ್ನು ರಸ್ತೆ ಮಧ್ಯೆ ನಿಲ್ಲಿಸಿಕೊಂಡು ಮದ್ಯಪಾನ ಮಾಡುತ್ತಿದ್ದರು. ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದ ಇವರನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಸಿಟ್ಟಿನಲ್ಲಿ ಯುವಕರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಯುವಕರು ಪೊಲೀಸರ ಬೈಕ್ ಕೀ ಕಸಿದುಕೊಂಡು, ಅವರ ಕೈ ತಿರುಚಿ ಹಲ್ಲೆ ನಡೆಸಿದ್ದಾರೆ. ಬಳಿಕ ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಸದ್ಯ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.









