
ಚಿತ್ರದುರ್ಗ: ರಾಜ್ಯ ರಾಜಕಾರಣದ ಧೀಮಂತ ನಾಯಕ, ಶಿಕಾರಿಪುರದ ಸಿಂಹ ಬಿ.ಎಸ್ ಯಡಿಯೂರಪ್ಪನವರ 50 ವರ್ಷಗಳ ಸುದೀರ್ಘ ರಾಜಕೀಯ ಪಯಣದ ಸಂಭ್ರಮಕ್ಕೆ ಈಗ ಕೋಟೆನಾಡು ಚಿತ್ರದುರ್ಗ ಸಜ್ಜಾಗಿದೆ. ಮೇ 9ರಂದು ನಡೆಯಲಿರೋ ಈ ‘ಅಭಿಮಾನೋತ್ಸವ’ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡ ಭಾಗಿಯಾಗಲಿದ್ದಾರೆ.
ಹೌದು, ಚಿತ್ರದುರ್ಗದ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಬರೆಯಲು ಬಿಜೆಪಿ ಸಜ್ಜಾಗಿದೆ. ಮೇ 9ರಂದು ನಡೆಯಲಿರೋ ಬಿಎಸ್ವೈ ಅಭಿಮಾನೋತ್ಸವ ಕೇವಲ ಒಂದು ಸಮಾರಂಭವಲ್ಲ, ಅದೊಂದು ಕೇಸರಿ ಪಡೆಯ ಬೃಹತ್ ಶಕ್ತಿ ಪ್ರದರ್ಶನ. ಅಂದು ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಮೊದಲು ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಅಭಿಮಾನೋತ್ಸವವು,ಪಶ್ಚಿಮ ಬಂಗಾಳದ ಸಿಎಂ ಪ್ರಮಾಣ ವಚನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಫಿಕ್ಸ್ ಆಗಿದೆ. ಹೀಗಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಮಧ್ಯಾಹ್ನ 3 ಗಂಟೆಗೆ ಚಿತ್ರದುರ್ಗ ತಲುಪಲಿದ್ದು, ವಿವಿಧ ಮಠಗಳ ಮಠಾಧೀಶರು ಸೇರಿದಂತೆ 10 ಲಕ್ಷಕ್ಕೂ ಅಧಿಕ ಜನರು ರಾಜ್ಯದ ವಿವಿಧ ಮೂಲೆಗಳಿಂದ ಕೋಟೆನಾಡಿಗೆ ಧಾವಿಸಲಿದ್ದಾರೆ. ಇದಕ್ಕಾಗಿ ಜರ್ಮನ್ ಮಾದರಿಯ ಪೆಂಡಾಲ್ ಸಜ್ಜಾಗಿದ್ದು, ಬೃಹತ್ ವೇದಿಕೆ ಸಂಪೂರ್ಣ ಕೇಸರಿಮಯವಾಗಿ ಕಣ್ಮನ ಸೆಳೆಯುವಂತಿದೆ.
ಇನ್ನು ಚಿತ್ರದುರ್ಗ ಸಂಸದ ಹಾಗೂ ಅಭಿಮಾನೋತ್ಸವದ ಗೌರವಾಧ್ಯಕ್ಷರಾದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಾಂಸ್ಕೃತಿಕ ವೈಭವಕ್ಕೂ ಪ್ಲಾನ್ ಮಾಡಲಾಗಿದೆ. ಬಿಎಸ್ವೈ ಪುರ ಪ್ರವೇಶದ ವೇಳೆ ಒಂದು ಸಾವಿರಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭಮೇಳದೊಂದಿಗೆ ಅವರನ್ನು ಸ್ವಾಗತಿಸಲಿದ್ದಾರೆ. ವಿಶೇಷ ಅಂದರೆ ಯಡಿಯೂರಪ್ಪನವರು ಹಿಂದೆ ಬಳಸುತ್ತಿದ್ದ ಸಿಕೆಆರ್45 ಅಂಬಾಸಿಡರ್ ಕಾರು ಈ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿರಲಿದೆ. ಅಲ್ಲದೆ ಬಿಎಸ್ವೈ ಅವರ ಹೋರಾಟದ ಬದುಕಿನ ಕುರಿತ ಕಮಲದಲ್ಲಿ ಅರಳಿದ ಹೂವು ಕೆಂದಾವರೆ ಮತ್ತು ಸದನ ಶಿಖಾರಿ ಪುಸ್ತಕಗಳು ಅಂದು ಬಿಡುಗಡೆಯಾಗಲಿದ್ದು, ಇವರ ಅಧಿಕಾರಾವಧಿಯಲ್ಲಿ ಮಹಿಳೆಯರು ಹಾಗೂ ಜನಸಾಮಾನ್ಯರ ಹಿತಕ್ಕಾಗಿ ಜಾರಿಗೊಳಿಸಿದ ಯೋಜನೆಗಳ ಸ್ತಬ್ದ ಚಿತ್ರಗಳ ಮೂಲಕ ಜನಮನ ಸೆಳೆಯಲು ಆಯೋಜಕರು ಮುಂದಾಗಿದ್ದಾರೆ.
ಒಟ್ಟಾರೆ, ಚುನಾವಣಾ ಫಲಿತಾಂಶದ ಏರಿಳಿತದ ನಡುವೆಯೂ ಬಿಎಸ್ವೈ ಅಭಿಮಾನೋತ್ಸವದ ಮೂಲಕ ಬಿಜೆಪಿ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಲು ಮುಂದಾಗಿದೆ. ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ನಡೆಯೋ ಈ ಕಾರ್ಯಕ್ರಮದಿಂದ ಇಡೀ ರಾಜ್ಯವೇ ಈಗ ಚಿತ್ರದುರ್ಗದತ್ತ ತಿರುಗಿ ನೋಡುವಂತಾಗಿದೆ.









