Thursday, May 7, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಶೃಂಗೇರಿ ಶ್ರೀಗಳಿಗೆ ಮೇ 7ರಂದು ಗುರುವಂದನೆ : ನಾಳೆ ಪೋಳ್ಯದಿಂದ ವಾಹನ ಜಾಥಾ, ಬಪ್ಪಳಿಗೆ ಜಂಕ್ಷನ್’ನಿಂದ ಪೂರ್ಣಕುಂಭ ಸ್ವಾಗತ -ಕಹಳೆ ನ್ಯೂಸ್

ಗುರುಗಳ ಉಪಸ್ಥಿತಿಯಲ್ಲಿ ಉಳ್ಳಾಲ್ತಿ ಮೂಲಸ್ಥಾನವಾದ ಕರ್ಕುಂಜದ ತೊಟ್ಟಿಲಕಯದಲ್ಲಿ ಚಂಡಿಕಾಯಾಗ

ಪುತ್ತೂರು: ಮೇ 7ರಂದು ಪುತ್ತೂರಿನ ಬಪ್ಪಳಿಗೆ ಅಂಬಿಕ ಸಮೂಹ ವಿದ್ಯಾಸಂಸ್ಥೆಗಳ ಆವರಣದಲ್ಲಿ ಹಮ್ಮಿಕೊಂಡಿರುವ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಗುರುವಂದನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೇ 6ರಂದು ಸಂಜೆ ಕಬಕದ ಪೋಳ್ಯದಿಂದ ವಾಹನ ಜಾಥಾದ ಮೂಲಕ ಶ್ರೀಗಳನ್ನು ಬರಮಾಡಿಕೊಳ್ಳಲಾಗುವುದು. ಬಪ್ಪಳಿಗೆ ಜಂಕ್ಷನ್’ನಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಅಂಬಿಕಾ ವಿದ್ಯಾಸಂಸ್ಥೆಯ ಪ್ರಾಂಗಣಕ್ಕೆ ಮೆರವಣಿಗೆಯಲ್ಲಿ ಕರೆತರಲಾಗುವುದು ಎಂದು ಅಭಿವಂದನಾ ಸಮಿತಿ ಅಧ್ಯಕ್ಷ ಚಿದಾನಂದ ಬೈಲಾಡಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅದ್ವೈತ ತತ್ವದ ಮೂಲಕ ಧರ್ಮ ಜಾಗೃತಿಯನ್ನು ಉಂಟು ಮಾಡಿ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದ ಮತ್ತು ಶ್ರೀ ಮದ್ಭಗವದ್ಗೀತೆ, ಉಪನಿಷತ್ತುಗಳು, ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ಬರೆದ ಧಾರ್ಮಿಕ ಕ್ಷೇತ್ರದ ದಿವ್ಯಚೇತನ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಂಧಾನಂಗಳವರ ಗುರುವಂದನೆ ಹಾಗೂ ಪಾದಪೂಜೆ ಮೇ 7ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಮೇ 6ರಂದು ಭವ್ಯ ಸ್ವಾಗತಿ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.

 

ಮೇ 7ರಂದು ಬೆಳಿಗ್ಗೆ ಗುರುಗಳ ಉಪಸ್ಥಿತಿಯಲ್ಲಿ ಉಳ್ಳಾಲ್ತಿ ಮೂಲಸ್ಥಾನವಾದ ಕರ್ಕುಂಜದ ತೊಟ್ಟಿಲಕಯದಲ್ಲಿ ಚಂಡಿಕಾಯಾಗ ನಡೆಯಲಿದೆ. ನಂತರ ಬೆಳಿಗ್ಗೆ 9ರಿಂದ ಅಂಬಿಕಾ ವಿದ್ಯಾಸಂಸ್ಥೆಯ ಆವರಣಕ್ಕೆ ಆಗಮಿಸಿ, ಹಿಂದೂ ಬಾಂಧವರ ವತಿಯಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾವಾಚಸ್ಪತಿ ವಿದ್ವಾನ್ ಕೆರೆಕೈ ಉಮಾಕಾಂತ ಭಟ್ಟ ಅವರು ಅಭಿವಂದನಾ ನುಡಿಯನ್ನು ನಡೆಸಿಕೊಡಲಿದ್ದಾರೆ. ನಂತರ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮಗಳೊಂದಿಗೆ ಸಮಾರೋಪ ಸಮಾರಂಭ ಹಾಗೂ ಪುತ್ತೂರು ತಾಲೂಕು ಧರ್ಮಾಭ್ಯುದಯ ಧರ್ಮ ಶಿಕ್ಷಣ ತರಗತಿಗಳ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಶಿಷ್ಯರಿಂದ ಸಮರ್ಪಣಮ್ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ವಿಶೇಷವಾಗಿ ಚಂದ್ರಮೌಳೀಶ್ವರ ದೇವರ ಸಹಿತ ಶ್ರೀ ಗುರುಗಳು ಪುತ್ತೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಹಿಂದೂ ಬಾಂಧವರು ತಮ್ಮ ತರವಾಡು ಮತ್ತು ಇನ್ನಿತರ ಮನೆಗಳಲ್ಲಿ ಪಶ್ನಾ ಚಿಂತನೆಯಲ್ಲಿ ಶೃಂಗೇರಿಗೆ ಹೋಗಿ ಪಾದ ಪೂಜೆಯನ್ನು ಮಾಡಿಸಿ ಗುರುಗಳ ಅನುಗ್ರಹವನ್ನು ಪಡೆದುಕೊಳ್ಳಬೇಕಾಗಿ ಕಂಡು ಬಂದಲ್ಲಿ, ಶೃಂಗೇರಿ ಶ್ರೀಳೇ ಪುತ್ತೂರಿಗೆ ಆಗಮಿಸಿ ಪಾದಪೂಜೆ ಸ್ವೀಕರಿಸುವ ಹಿನ್ನಲೆಯಲ್ಲಿ, ಹಿಂದೂ ಬಾಂಧವರು ಇದರ ಸದುಪಯೋಗವನ್ನು ಪಡಕೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ.

ಶೃಂಗೇರಿಯಲ್ಲಿ ನೇರವೇರುವ ರೀತಿಯಲ್ಲಿಯೇ ಪಾದಪೂಜೆ ಆಗುವ ಕಾರಣ, ಆಸಕ್ತರು ಮೇ 7ರ ಬೆಳಿಗ್ಗೆ 9ಕ್ಕೆ ಆಗಮಿಸಿ ಪಾದುಕಾ ಪೂಜಾ ರಶೀದಿಯನ್ನು ಪಡಕೊಂಡು ಪಾದಪೂಜೆಯಲ್ಲಿ ಭಾಗವಹಿಸಬಹುದು. ಸಭಾ ಕಾರ್ಯಕ್ರಮದ ನಂತರ ಎಲ್ಲಾ ಭಕ್ತಾಧಿಗಳಿಗೆ ಮಂತ್ರಾಕ್ಷತೆ ಪ್ರಸಾದವನ್ನು ಗುರುಗಳು ವಿತರಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಮುಗೆರೋಡಿ ಬಾಲಕೃಷ್ಣ ರೈ, ಅಂಬಿಕಾ ಸಮೂಹ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಧರ್ಮಾಭ್ಯುದಯ ತಾಲೂಕು ಸಮಿತಿ ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಸಮಿತಿ ಕಾರ್ಯಾಧ್ಯಕ್ಷ ಶಿವರಾಂ ಆಳ್ವ, ಪ್ರಧಾನ ಕಾರ್ಯದರ್ಶಿ ಆರ್.ಸಿ. ನಾರಾಯಣ್ ರೆಂಜ ಉಪಸ್ಥಿತರಿದ್ದರು.