ಫ್ರೀ ಫೈರ್ ಗೇಮ್ಗೆ ಅಡಿಕ್ಟ್ ಆಗಿದ್ದ ಬಾಲಕನ ಹತ್ಯೆ : ಮನನೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ – ಕಹಳೆ ನ್ಯೂಸ್

ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಾರಹಳ್ಳಿಯ ವಿನಾಯಕ ಲೇಔಟ್ ನಡೆದಿದೆ.
ಬಿಹಾರಕ್ಕೆ ಪ್ರವಾಸ ತೆರಳಿದ್ದ ವೇಳೆ ಆತ್ಮಹತ್ಯೆಗೆ ಕುಟುಂಬಸ್ಥರು ಶರಣಾಗಿದ್ದಾರೆ. 14 ವರ್ಷದ ಅಮೋಘ ಕೀರ್ತಿ ಕೊಲೆಯಾದ ಬಾಲಕ, ನಾಗಪ್ರಸಾದ್ (50) ಕೊಲೆ ಮಾಡಿದ ವ್ಯಕ್ತಿ. ಇದನ್ನೂ ಓದಿ: ರೀಲ್ಸ್ ಗೀಳು – ಕುತ್ತಿಗೆಗೆ ಹಾಕಿದ್ದ ಕುಣಿಕೆ ಬಿಗಿಯಾಗಿ ಮಹಿಳೆ ಸಾವು
ಕೆಲ ತಿಂಗಳ ಹಿಂದೆ ಫ್ರೀ ಫೈರ್ ಗೇಮ್ಗೆ ಅಡಿಕ್ಟ್ ಆಗಿದ್ದ ತನ್ನ ಅಕ್ಕನ ಮಗ ಅಮೋಘ ಕೀರ್ತಿಯನ್ನ (14) ಕೊಲೆ ಮಾಡಿದ್ದ ಮಾವ ನಾಗಪ್ರಸಾದ್ (50) ಸೇರಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಕನ ಸಾವಿನಿಂದ ಮನನೊಂದಿದ್ದ ಕುಟುಂಬಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಫ್ರೀ ಫೈಯರ್ ಗೇಮ್ಗೆ ಅಡಿಕ್ಟ್ ಆಗಿದ್ದ ಬಾಲಕ
ನಾಗಪ್ರಸಾದ್ ಸಹೋದರಿ ಶಿಲ್ಪಾ ಎಂಬಾಕೆಯ ಮಗ. ಬಾಲಕನು 8 ತಿಂಗಳಿನಿಂದ ಮಾವ ನಾಗಪ್ರಸಾದ್ ಜೊತೆಗೆ ವಾಸವಿದ್ದ. ಈ ವೇಳೆ ಮೊಬೈಲ್ ನಲ್ಲಿ ಫ್ರೀ ಫೈಯರ್ ಗೇಮ್ಗೆ ಅಡಿಕ್ಟ್ ಆಗಿದ್ದ. ಹಣಕ್ಕಾಗಿ ಮಾವನನ್ನ ಬಳಿ ಪೀಡಿಸುತ್ತಿದ್ದ. ಇದರಿಂದ ಮನನೊಂದಿದ್ದ ನಾಗಪ್ರಸಾದ್ ಬಾಲಕನನ್ನ ಕೊಲೆ ಮಾಡಿದ್ದಾನೆ. ನಂತರ ತಾನೇ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಎಫ್ಐಆರ್ ದಾಖಲಿಸಿದ್ದ ಜೈಲಿಗಟ್ಟಿದ್ದರು. ಆ ನಂತರ ಸಹೋದರಿ ಶಿಲ್ಪಾ ಅಣ್ಣನನ್ನ ಬೇಲ್ ಮೇಲೆ ಕರೆತಂದಿದ್ದಳು.
ಅಮೋಘ ಕೀರ್ತಿಯನ್ನು ಕೊಂದ ಪಾಪ ಪರಿಹಾರಕ್ಕೆ ಇಡೀ ಕುಟುಂಬ ಕೆಲ ತಿಂಗಳಿಂದ ದೇವಾಲಯಗಳಿಗೆ ಭೇಟಿ ನೀಡುತ್ತಿತ್ತು. ಅದೇ ಕಾರಣಕ್ಕಾಗಿ ಬಿಹಾರಕ್ಕೆ ಪ್ರವಾಸ ತೆರಳಿದ್ದ ನಾಗಪ್ರಸನ್ನ ಆತನ ತಾಯಿ ಸುಮಂಗಲಾ (78), ಸಹೋದರಿ ಶಿಲ್ಪಾ (48), ಶ್ರುತಾ (43) ಎಲ್ಲರೂ ಒಮ್ಮೆಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಶರೀರಗಳ ಬಳಿ ನಿದ್ರೆ ಮಾತ್ರೆಗಳು ಸಿಕ್ಕಿದ್ದು, ಓವರ್ ಡೋಸ್ನಿಂದಲೇ ಕುಟುಂಬದವರು ಮೃತಪಟ್ಟಿದ್ದಾರೆ. ಮೃತರೆಲ್ಲರೂ ತುಮಕೂರಿನ ಗುಬ್ಬಿ ಮೂಲದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ವೇಳೆ ಮೃತರ ಬಳಿ ಸಿಕ್ಕ ಮೊಬೈಲ್ ಫೋನುಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಟಿಎಂ ಕಾರ್ಡ್, 1.18 ಲಕ್ಷ ನಗದು ಹಣ ಸೇರಿ ಹಲವು ದಾಖಲೆಗಳು ಹಾಗೂ ನಿದ್ರೆ ಮಾತ್ರೆಗಳನ್ನ ವಶಕ್ಕೆ ಪಡೆದಿದ್ದಾರೆ.









