Recent Posts

Saturday, April 25, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ : ಜ.15ರಿಂದ ಜ.20ರವರೆಗೆ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದ ಜಾತ್ರಾ ಮಹೋತ್ಸವ – ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪೇರಮೋಗ್ರುವಿನ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಜ.15ರಿಂದ ಜ.20ರವರೆಗೆ ವಾರ್ಷಿಕ ಜಾತ್ರ ಮಹೋತ್ಸವ ನಡೆಯಲಿದೆ.

ಶ್ರೀಮದ್ ಜಗದ್ಗುರು ಶಂಕರಾಚಾರ್ಯಪೀಠ ಗೋಕರ್ಣ ಮಂಡಲಾಧೀಶ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀ ರಾಮಚಂದ್ರಾಮರಮಠ, ಹೊಸನಗರ ಇವರ ಶುಭಾಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ವೈದಿಕ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜ. 15ರಂದು ಬೆಳ್ಳಗ್ಗೆ 9.30ರಿಂದ ಗಣಪತಿ ಹವನ, ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ ನಡೆದು, ಸಂಜೆ 5 ಗಂಟೆಗೆ ಹಸಿರು ಹೊರೆಕಾಣಿಕೆ ಸಮರ್ಪಣೆಯಾಗಲಿದೆ.

ಸಂಜೆ 5.30ರಿಂದ ಗಿರೀಶ್ ರೈ ಕಕ್ಕೆಪದವು ಮತ್ತು ಶ್ರೀಮತಿ ಕಾವ್ಯಶ್ರೀ ಅಜೇರು ಮತ್ತು ಬಳಗದವರಿಂದ ಯಕ್ಷಗಾನ ವೈಭವ ನಡೆಯಲಿದ್ದು, 7.30ರಿಂದ ಧ್ವಜಾರೋಹಣ, ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ ನೇರವೇರಲಿದೆ.

ಜ.16ರಂದು ಬೆಳ್ಳಗ್ಗೆ ಶ್ರೀ ದೇವರ ಬಲಿ ಉತ್ಸವ, ಮಧ್ಯಾಹ್ನ ಕಲಶಾಭಿಷೇಕ ಮಹಾಪೂಜೆ, ಪ್ರಸಾದ ವಿತರಣೆ, ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟ ಕರ್ನಾಟಕ ಇವರ ವತಿಯಿಂದ ಶ್ರೀಮತಿ ಶಾಲಿನಿ ಶ್ರೀಕಾಂತ್ ಮತ್ತು ಬಳಗ ಪ್ರಣಪ ನೃತ್ಯಾಲಯ ಬೆಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಆ ಬಳಿಕ ಸಂಜೆ 6.30ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ವಿಶೇಷ ವಸಂತ ಕಟ್ಟೆ ಪೂಜೆ. ನೃತ್ಯ ಬಲಿ ನಡೆಯಲಿದೆ.

ಜ.17ರಂದು ಬೆಳ್ಳಗ್ಗೆ 9.30ರಿಂದ ಶ್ರೀ ದೇವರ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಕೆದಿಲದಿಂದ ಮಹಾದೈವಗಳ ಭಂಡಾರ ಆಗಮನ, ದೇವರ ಭೇಟಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆದು, ಸಂಜೆ ಕಿಶೋರ್ ಕುಮಾರ್ ಪೆರ್ಲ ಮತ್ತು ಬಳಗದವರಿಂದ ಭಕ್ತಿ ರಸ ಮಂಜರಿ ನಡೆಯಲಿದೆ. ರಾತ್ರಿ 7.00ಕ್ಕೆ ಶ್ರೀ ದೇವರ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ಉಯ್ಯಾಲೋತ್ಸವ ನೇರವೇರಲಿದೆ.

ಜ.18ರಂದು ಬೆಳ್ಳಗ್ಗೆ ಶ್ರೀ ದೇವರ ಬಲಿ ಉತ್ಸವ, ಕಲಶಾಭಿಷೇಕ, ಮಹಾಪೂಜೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆದು, ಸಂಜೆ ಅನೇಕ ಗಣ್ಯಾಥಿ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಪುತ್ತೂರು ಅಕ್ಷಯ ಕಾಲೇಜಿನ ಸಂಚಾಲಕರಾದ ಜಯಂತ ನಡುಬೈಲು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಡಾ| ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದು, ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಮಠದ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಅನುಗ್ರಹ ಭಾಷಣ ಮಾಡಲಿದ್ದಾರೆ. ಸಂಜೆ ದೀಪೋತ್ಸವ, ಕ್ಷೇತ್ರ ಮಹಾ ದೈವ ರಕ್ತೇಶ್ವರಿಯ ಭೇಟಿ ಹಾಗೂ ರಾತ್ರಿ ರಥೋತ್ಸವ ನಡೆಯಲಿದೆ.

ಜ.19ರಂದು ಕವಾಟೋದ್ಘಾಟನೆ, ತೈಲಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಶ್ರೀ ದೇವರ ಬಲಿ ಹೊರಟು ಮೆರವಣಿಗೆ ‘ಅವಭೃತ ಸ್ನಾನ’, ಹಾಗೂ ಧ್ವಜಾವರೋಹಣ ನಡೆಯಲಿದೆ. ರಾತ್ರಿ ಬಪ್ಪನಾಡು ಮೇಳದವರಿಂದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಇನ್ನು ಜ.20ರಂದು ಬೆಳ್ಳಗ್ಗೆ ಮಹಾಗಣಪತಿ ಹೋಮ, ಸಂಪ್ರೋಕ್ಷಣೆ, ಕಲಶಾಭಿಷೇಕ, ವೇದಪಾರಾಯಣ, ಸೀಯಾಳಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಅನ್ನ ಸಂತರ್ಪಣೆ ಹಾಗೂ ಸಂಜೆ ಶ್ರೀ ಕೃಷ್ಣ ಕಲಾವೃಂದ ಕರಿಮಜಲು ಇವರಿಂದ ಸಾಂಸ್ಕೃತಿಕ ವೈಭವ, ರಾತ್ರಿ ಮಹಾ ರಂಗಪೂಜೆ ಹಾಗೂ ಕ್ಷೇತ್ರದ ಗುಳಿಗ ದೈವದ ನೇಮೋತ್ಸವ ನಡೆಯಲಿದೆ.