Recent Posts

Sunday, April 26, 2026
ಬೆಂಗಳೂರುರಾಜ್ಯಸುದ್ದಿ

ಬೆಂಗಳೂರು: ಯುಗಾದಿ ಹಬ್ಬಕ್ಕೆ ಕೆಎಸ್​ಆರ್​ಟಿಸಿಯಿಂದ 2000ಕ್ಕೂ ಹೆಚ್ಚುವರಿ ಬಸ್ ವ್ಯವಸ್ಥೆ- ಕಹಳೆ ನ್ಯೂಸ್

ಬೆಂಗಳೂರು: ಯುಗಾದಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿವಿಧ ಊರುಗಳಿಗೆ 2000ಕ್ಕೂ ಹೆಚ್ಚು ವಿಶೇಷ ಬಸ್​ಗಳ ವ್ಯವಸ್ಥೆ ಮಾಡಿದೆ. ಯುಗಾದಿ ಹಬ್ಬ ಹಾಗೂ ಸಾಲು ರಜೆಗಳ ಕಾರಣ ಊರಿಗೆ ತೆರಳುವವರಿಗೆ ಹಾಗೂ ಪ್ರವಾಸ ತೆರಳುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಎಸ್​​ಆರ್​ಟಿಸಿ ಈ ಕ್ರಮಕ್ಕೆ ಮುಂದಾಗಿದೆ. ಕೆಎಸ್‌ಆರ್‌ಟಿಸಿ ಸೇರಿ ನಾಲ್ಕು ನಿಗಮಗಳು ವಿಶೇಷ ಬಸ್‌ಗಳು ಕಾರ್ಯಾಚರಣೆಗೆ ಸಜ್ಜಾಗಿವೆ.

ಏ. 9ರಂದು ಮಂಗಳವಾರ ಯುಗಾದಿ ಹಬ್ಬ ಇರಲಿದೆ. ಶನಿವಾರ, ಭಾನುವಾರ ಹೇಗೂ ರಜೆಯಾದ್ದರಿಂದ ಸೋಮವಾರ ಒಂದು ದಿನ ರಜೆ ಮಾಡಿದರೆ 4 ದಿನ ರಜೆ ಸಿಕ್ಕಂತಾಗುತ್ತದೆ. ಮುಂದಿನ ವಾರ, ಏಪ್ರಿಲ್ 11 ರ ಗುರುವಾರ ಮುಸ್ಲಿಮರ ಹಬ್ಬ ರಂಜಾನ್ ಸಹ ಇರಲಿದೆ. ಮತ್ತೆ ದೀರ್ಘ ವಾರಾಂತ್ಯ ರಜೆ ಸಿಗಲಿದೆ. 13 ರಂದು ಎರಡನೇ ಶನಿವಾರ ರಜೆ ಹಾಗೂ14 ರಂದು ಭಾನುವಾರ ರಜೆ‌ ಇದೆ. ಈ ಎಲ್ಲ ಕಾರಣಗಳನ್ನು ಮತ್ತು ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಕೆಎಸ್​ಆರ್​ಟಿಸಿ ಹೆಚ್ಚುವರಿ ಬಸ್ ನಿಯೋಜನೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೆಎಸ್‌ಆರ್‌ಟಿಸಿಯಿಂದ 1,750ಬಸ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 145 ಬಸ್, ಕೆಕೆಆರ್‌ಟಿಸಿಯ 200 ಬಸ್ ಹಾಗೂ ಬಿಎಂಟಿಸಿಯ 180 ವಿಶೇಷ ಬಸ್‌ಗಳು ಸಂಚಾರ ಮಾಡಲಿವೆ. ಒಟ್ಟು ನಾಲ್ಕು ನಿಗಮಗಳಿಂದ 2,275 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಹಬ್ಬಗಳು ಹಾಗೂ ವಾರಾಂತ್ಯದ ಕಾರಣ ಏಪ್ರಿಲ್ 7 ರಿಂದ ಏಪ್ರಿಲ್ 14ರ ವರೆಗೆ ಬರೋಬ್ಬರಿ 5 ರಜೆಗಳು ಸಿಗಲಿವೆ. ವಿದ್ಯಾರ್ಥಿಗಳಿಗೆ ಬೇಸಗೆ ರಜೆಯೂ ಶುರುವಾದ ಕಾರಣ ಮಕ್ಕಳ ಜೊತೆ ಪ್ರವಾಸಕ್ಕೆ ತೆರಳು ಪೋಷಕರು ಯೋಜನೆ ಹಾಕಿಕೊಂಡಿದ್ದಾರೆ. ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಶೇಷ ಬಸ್ ಸೇವೆ ಒದಗಿಸಲಾಗುತ್ತಿದೆ.

ಎಲ್ಲಿಗೆಲ್ಲ ವಿಶೇಷ ಬಸ್​?:

ನಗರದ ಕೆಂಪೇಗೌಡ ನಿಲ್ದಾಣ, ಸ್ಯಾಟಲೈಟ್ ನಿಲ್ದಾಣ, ಶಾಂತಿನಗರದಿಂದ ವಿಶೇಷ ಬಸ್ ಸೇವೆ ದೊರೆಯಲಿದೆ. ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ ಸೇರಿ‌ ಹಲವು ಸ್ಥಳಗಳಿಗೆ ಹೆಚ್ಚುವರಿ ಬಸ್ ಸೇವೆ ದೊರೆಯಲಿದೆ. ನೆರೆರಾಜ್ಯಗಳ ನಗರಗಳಾದ ಹೈದರಾಬಾದ್, ಚೆನ್ನೈ,‌ ಗೋವಾ ಪಣಜಿ, ಶಿರಡಿ, ಎರ್ನಾಕುಲಂಗೆ ವಿಶೇಷ ಬಸ್ ಸೇವೆ ಇರಲಿದೆ. ಸಾಮಾನ್ಯವಾಗಿ ಹಬ್ಬಗಳು, ಸಾಲು ರಜೆಗಳ ಸಂದರ್ಭ ಕೆಎಸ್​ಆರ್​​ಟಿಸಿ ವಿಶೇಷ ಬಸ್​ ಸೇವೆ ಒದಗಿಸುತ್ತಿದೆ. ಈ ಹಿಂದೆಯೂ ದಸರಾ, ದೀಪಾವಳಿ ಮತ್ತಿತರ ಹಬ್ಬಗಳ ಸಂದರ್ಭ ಹೆಚ್ಚುವರಿ ಬಸ್ ಸೇವೆ ಒದಗಿಸಿತ್ತು.