Wednesday, April 29, 2026
ಸುದ್ದಿ

ಸಾವಿನ ಭವಿಷ್ಯ ನುಡಿಯುತ್ತಿದ್ದ ಆ ಡಾಕ್ಟರ್ ಇದ್ದ ಜಾಗ ಈಗ ಭೂತ ಬಂಗಲೆಯಂತಾಗಿದೆ- ಕಹಳೆ ನ್ಯೂಸ್

ಆ ಡಾಕ್ಟರ್ ಸಾವಿನ ಭವಿಷ್ಯ ಹೇಳುತ್ತಿದ್ದರಂತೆ. ಜೊತೆಗೆ, ಅಂತ್ಯದ ದಿನ ಎದುರಿಸುತ್ತಿದ್ದವರನ್ನು ಕರೆದೊಯ್ದು ಮನುಷ್ಯನ ಪ್ರಾಣ ಎಲ್ಲಿಗೆ ಹೋಗುತ್ತದೆ ಎಂದು ಅಧ್ಯಯನ ಮಾಡುತ್ತಿದ್ದರಂತೆ…

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನೆಷ್ಟೇ ಮುಂದುವರಿದಿರಬಹುದು. ವಿಜ್ಞಾನ, ತಂತ್ರಜ್ಞಾನದಲ್ಲಿ ದೊಡ್ಡ ಸಾಧನೆ ಮಾಡಿರಬಹುದು. ಆದರೆ, ಸಾವಿನ ರಹಸ್ಯವನ್ನು ಯಾರಿಂದಲೂ ಭೇದಿಸಲು ಸಾಧ್ಯವಾಗಿಲ್ಲ. ಸಾವೇ ಹಾಗೆ. ಯಾವಾಗ, ಹೇಗೆ ಎದುರಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹುಟ್ಟು ನಿಶ್ಚಿತ, ಸಾವು ಖಚಿತ. ಹುಟ್ಟಿದ ಮನುಷ್ಯ ಸಾಯಲೇಬೇಕು. ಆದರೆ, ಮೃತಪಟ್ಟ ಬಳಿಕ ಏನು? ಎಂಬುದು ಇಂದಿಗೂ ಪ್ರಶ್ನೆಯೇ. ಶಾಶ್ವತ ನಿದ್ರೆಗೆ ಜಾರಿಗೆ ಮನುಷ್ಯ ಮುಂದೇನಾಗುತ್ತಾನೆ…? ಆತ್ಮವಾಗಿ ಸುಳಿದಾಡುತ್ತನಾ…? ಸ್ವರ್ಗ, ನರಕ ಸೇರುತ್ತನಾ…? ಬೇರೊಂದು ದೇಹ ಸೇರಿ ಹುಟ್ಟಿ ಬರುತ್ತಾನಾ…? ಪುನರ್ಜನ್ಯ ಇದೆಯಾ…? ಈ ಎಲ್ಲಾ ಪ್ರಶ್ನೆಗಳ ಸುರುಳಿ ಬಿಚ್ಚುವಂತೆ ಮಾಡುತ್ತದೆ ಸಾವೆಂಬ ಭಯಾನಕ ಘಟ್ಟ. ಬಹುಶಃ ಸಾವನ್ನು ಎದುರಿಸಲು ಯಾರೂ ಸಿದ್ಧರೇ ಇರುವುದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಹೋದವರಿಗೂ ಜೀವ ಹೋಗುವ ಕ್ಷಣದಲ್ಲೂ `ಅಯ್ಯೋ ನಾನಿನ್ನು ಬದುಕಬೇಕು. ಯಾರಾದರೂ ರಕ್ಷಿಸಬಾರದೇ’ ಎಂದೆನಿಸಿದರೂ ಅಚ್ಚರಿಯೇನಿಲ್ಲ. ಸಾವೇ ಹಾಗೆ… ಅದೊಂದು ಅವ್ಯಕ್ತ ಭಯ… ಸಾವನ್ನು ಯಾವತ್ತೂ ನಾವು ಊಹಿಸಲು ಸಾಧ್ಯವೇ ಇಲ್ಲ. ಯಾರಿಗೂ ಇದನ್ನು ಎದುರಿಸುವ ಧೈರ್ಯವೂ ಇರುವುದಿಲ್ಲ. ಆದರೆ, ಅದೊಬ್ಬ ವೈದ್ಯರು ಜನರಿಗೆ ಸಾವಿನ ದಿನಾಂಕ ಹೇಳುತ್ತಿದ್ದರಂತೆ, ಕೆಲವರನ್ನು ತಮ್ಮ ಮನೆಗೆ ಕರೆದೊಯ್ದು ಸಾವಿನ ಅಧ್ಯಯನ ನಡೆಸುತ್ತಿದ್ದರಂತೆ

ಈ ಸುದ್ದಿಯ ಆರಂಭ ಇರುವುದು ಉತ್ತರಾಖಂಡದಲ್ಲಿ. ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಲೋಹಘಾಟ್‌ನಲ್ಲಿ ಅದೊಂದು ಭಯಾನಕ ಬಂಗಲೆ. ಹೇಳಿಕೇಳಿ ಉತ್ತರಾಖಂಡ ಸುಂದರ ತಾಣಕ್ಕೆ ಹೆಸರುವಾಸಿ. ಇಲ್ಲಿನ ಸುಂದರ ಪರಿಸರ ಎಲ್ಲರನ್ನೂ ಸೆಳೆದು ಬಿಡುತ್ತದೆ. ಇಂತಹ ಸೌಂದರ್ಯ ಖಣಿಯ ನಡುವೆ ಇದೆ ಈ ಬಂಗಲೆ. ಈ ಬಂಗಲೆಯಲ್ಲಿ ವಾಸವಾಗಿದ್ದವರೇ ಡಾಕ್ಟರ್ ಮೋರೀಸ್. ಅದು ಬ್ರಿಟಿಷರ ಆಳ್ವಿಕೆ ಇದ್ದ ಕಾಲ. ಈ ಬಂಗಲೆಯಲ್ಲಿ ಇಂಗ್ಲೆಂಡಿನ ದಂಪತಿ ನೆಲೆಸಿದ್ದರು. ಒಂದಷ್ಟು ವರ್ಷಗಳ ಸುಖ ಜೀವನ ನಡೆಸಿದ ಬಳಿಕ ಈ ದಂಪತಿ ಈ ಬಂಗಲೆಯನ್ನು ಚಾರಿಟೇಬಲ್ ಆಸ್ಪತ್ರೆ ಮಾಡಲು ಬಯಸಿದ್ದರು. ಹೀಗಾಗಿ, ಬಂಗಲೆಯನ್ನು ದಾನವಾಗಿ ಇವರು ನೀಡಿದ್ದರು. ಒಳ್ಳೆಯ ವೈದ್ಯಕೀಯ ಸೌಲಭ್ಯಗಳಿದ್ದ ಕಾರಣ ಬಹುಬೇಗ ಈ ಆಸ್ಪತ್ರೆ ಪ್ರಸಿದ್ಧಿ ಪಡೆಯಿತು. ಸುತ್ತಮುತ್ತಲಿನ ಊರಿನ ಜನ ಬಂದು ಇಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಎಲ್ಲಾ ಸರಿಯಾಗಿಯೇ ಸಾಗುತ್ತಿತ್ತು. ಆದರೆ, 1900ರ ಆಸುಪಾಸಿನಲ್ಲಿ ಇಲ್ಲಿನ ಪರಿಸ್ಥಿತಿ ಬದಲಾಯಿತು. ಅದೇನೆಂದರೆ, ಈ ಆಸ್ಪತ್ರೆಗೆ ಹೊಸ ವೈದ್ಯರೊಬ್ಬರು ಆಗಮಿಸಿದ್ದರು. ಅವರೇ ಡಾ ಮೋರೀಸ್.

ವೈದ್ಯರಾಗಿ ಮೋರೀಸ್ ಒಳ್ಳೆಯ ಹೆಸರು ಮಾಡಿದ್ದರು. ಅದೂ ಅಲ್ಲದೆ, ಇಲ್ಲಿನ ಜನ ಈ ವೈದ್ಯರಿಗೆ ಅಲೌಕಿಕ ಶಕ್ತಿ ಇದೆ ಎಂದು ನಂಬಿದ್ದರು. ಕಾರಣ, ಇವರು ಕೆಲವರ ಮರಣದ ದಿನಾಂಕವನ್ನು ನಿಖರವಾಗಿ ಹೇಳುತ್ತಿದ್ದರಂತೆ. ಇವರು ಹೇಳಿದಂತೆ ಅದೇ ದಿನ ರೋಗಿಗಳು ಸಾವನ್ನಪ್ಪುತ್ತಿದ್ದರಂತೆ. ಈ ಭವಿಷ್ಯವಾಣಿಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಡಾಕ್ಟರ್ ಮೋರೀಸ್ ತುಂಬಾ ಖ್ಯಾತಿ ಗಳಿಸಿದ್ದರು. ಜನ ಇವರನ್ನು ಡಾಕ್ಟರ್ ಡೆತ್ ಎಂದೇ ಕರೆಯುತ್ತಿದ್ದರು. ಅದೂ ಅಲ್ಲದೆ, ಹೀಗೆ ಮರಣದ ಸಮಯ ಹತ್ತಿರವಾಗುತ್ತಿದ್ದ ವೃದ್ಧರು, ಅನಾಥರನ್ನು ಇವರು ಹೆಚ್ಚಿನ ಚಿಕಿತ್ಸೆಗೆ ಮನೆಗೆ ಕರೆದುಕೊಂಡು ಹೋಗುತ್ತಿದ್ದರಂತೆ. ಹೀಗೆ ಕರೆದುಕೊಂಡು ಹೋದ ಡಾಕ್ಟರ್ ಮನೆಯ ಒಂದು ಕೋಣೆಯಲ್ಲಿ ಚಿಕಿತ್ಸೆ ಕೊಡುತ್ತಿದ್ದರಂತೆ. ಈ ಕೋಣೆಯೊಳಗೆ ಹೋದವರು ಯಾರೂ ಜೀವಂತವಾಗಿ ಬಂದೇ ಇಲ್ಲವಂತೆ…! ಇಷ್ಟಕ್ಕೂ ಡಾಕ್ಟರ್ ಇಲ್ಲಿ ಚಿಕಿತ್ಸೆ ಕೊಡುತ್ತಿರಲಿಲ್ಲ. ಬದಲಾಗಿ, ಮನುಷ್ಯನ ಪ್ರಾಣ ಹೇಗೆ ಹೋಗುತ್ತದೆ, ಹೋದ ಪ್ರಾಣ ಸೇರುವುದೆಲ್ಲಿಗೆ ಎಂಬ ವಿಚಿತ್ರ ಅಧ್ಯಯನವನ್ನು ಮಾಡುತ್ತಿದ್ದರಂತೆ…! ಅದೂ ಆತ ಜೀವಂತವಾಗಿರುವಾಗಲೇ…!

ಡಾಕ್ಟರ್ ಮೋರೀಸ್ ಸಾವಿನ ಸನಿಹದಲ್ಲಿರುವವರನ್ನು ತನ್ನ ಅಧ್ಯಯನಕ್ಕೆಂದು ಕರೆದುಕೊಂಡು ಹೋಗುತ್ತಿದ್ದ ಕೋಣೆಯ ಹೆಸರು ಮುಕ್ತಿ ಕೋಟರಿ. ಇದೇ ಮುಕ್ತಿ ಕೋಟರಿಗೆ ಹೋದವರು ವಾಪಸ್ ಬಂದೇ ಇಲ್ಲ. ಜನ ಡಾಕ್ಟರ್ ಮೋರೀಸ್ ಬಳಿ ಅತಿಮಾನುಷ ಶಕ್ತಿ ಇದೆ ಎಂದೇ ನಂಬಿದ್ದರು. ಇದೇ ಶಕ್ತಿಯಿಂದ ಇವರು ಭವಿಷ್ಯ ನುಡಿಯುತ್ತಿದ್ದಾರೆ ಎಂದು ಹೇಳುತ್ತಿದ್ದರು. ಆದರೆ, ವಾಸ್ತವ ಇದಲ್ಲವಂತೆ. ಒಂದು ಮೂಲದ ಪ್ರಕಾರ ಡಾಕ್ಟರ್ ಮೋರೀಸ್‌ಗೆ ಜನರ ದೇಹದ ಪ್ರಮುಖ ಅಂಗಾಂಗಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇತ್ತಂತೆ. ಆಗ ಈಗಿನಷ್ಟು ಅಭಿವೃದ್ಧಿ ಹೊಂದಿದ ಉಪಕರಣಗಳಿಲ್ಲ. ಹೀಗಾಗಿ, ಯಾರಾದರೂ ಇನ್ನು ಹೆಚ್ಚು ದಿನ ಬದುಕಲಾರರು ಎಂದು ಗೊತ್ತಾಗುತ್ತಿದ್ದಂತೆಯೇ ಮೋರೀಸ್ ಭವಿಷ್ಯ ನುಡಿದು ಅವರನ್ನು ಮುಕ್ತಿ ಕೋಟರಿಯಲ್ಲಿ ಚಿಕಿತ್ಸೆಗೆಂದು ಕರೆದೊಯ್ಯುತ್ತಿದ್ದರಂತೆ. ಇಲ್ಲಿ ವ್ಯಕ್ತಿಯ ಪ್ರಜ್ಞೆ ತೆಗೆದು ಜೀವಂತವಾಗಿ ಇರುವಾಗಲೇ ತಾನು ತಿಳಿದುಕೊಳ್ಳಬೇಕೆಂದುಕೊಂಡಿದ್ದ ಅಂಗಾಂಗಗಳ ಅಧ್ಯಯನ ಮಾಡುತ್ತಿದ್ದರಂತೆ. ಒಂದರ್ಥದಲ್ಲಿ ಇದು ವ್ಯವಸ್ಥಿತ ಕೊಲೆ ಎಂದು ಸ್ಥಳೀಯರು ಈಗಲೂ ಹೇಳುತ್ತಾರೆ. ಆದರೆ, ಮುಗ್ಧ ಜನರಿಗೆ ಇದರ ಅರಿವಿರಲಿಲ್ಲ. ಅವರು ಮೋರೀಸ್ ಅತಿಮಾನುಷ ಶಕ್ತಿ ಹೊಂದಿದ್ದು, ಇದೇ ಆಧಾರದಲ್ಲಿ ಚಿಕಿತ್ಸೆ ಕೊಡುತ್ತಿದ್ದಾರೆ ಎಂದೇ ಅಂದು ಜನ ನಂಬಿದ್ದರು.

ಮುಕ್ತಿ ಕೋಟರಿಯಲ್ಲಿ ಜೀವ ಕಳೆದುಕೊಂಡವರು ಎಷ್ಟು ಜನ ಎಂದು ಗೊತ್ತಿಲ್ಲ. ಆದರೆ, ಆತ್ಮಗಳ ಅಧ್ಯಯನ, ಪ್ರಾಣ ಹೋಗುವುದು ಹೇಗೆ ಎಂದು ತಿಳಿದುಕೊಳ್ಳುವ ಗುಂಗಿನಲ್ಲಿ ಮೋರೀಸ್ ಹಲವರ ಜೀವವನ್ನು ತೆಗೆದಿದ್ದರು. ತಾನು ಭವಿಷ್ಯ ನುಡಿದಿದ್ದವರನ್ನು ಮಾತ್ರ ಮೋರೀಸ್ ಮುಕ್ತಿ ಕೋಟರಿಗೆ ಕರೆದೊಯ್ದು ಚಿಕಿತ್ಸೆ ಕೊಡುತ್ತಿದ್ದದ್ದು. ಅಲ್ಲಿಗೆ ಮುಕ್ತಿ ಕೋಟರಿಗೆ ಹೋದವರು ಇನ್ನೆಂದೂ ಜೀವಂತವಾಗಿ ಮರಳುವುದಿಲ್ಲ ಎಂಬುದು ಪಕ್ಕಾ ಆಗುತ್ತಿತ್ತು. ಇದಾಗಿ ಸುಮಾರು ನೂರು ವರ್ಷ ಕಳೆದಿವೆ. ಆದರೆ, ಈ ಬಂಗಲೆಯ ಬಗೆಗಿನ ಭಯವಂತೂ ಕಡಿಮೆಯಾಗಿಲ್ಲ. ಅದೂ ಅಲ್ಲದೆ, ಈ ಬಂಗಲೆಯಲ್ಲಿ ಈಗಲೂ ಆರ್ತನಾದ ಕೇಳಿ ಬರುತ್ತದೆಯಂತೆ. ಹೀಗಂತ, ಇಲ್ಲಿನ ಜನ ನಂಬಿದ್ದಾರೆ. ಮೋರೀಸ್ ಕೈಯಲ್ಲಿ ಪ್ರಾಣ ಬಿಟ್ಟವರ ಆತ್ಮವೂ ಕೆಲವೊಮ್ಮೆ ಇಲ್ಲಿ ಕಾಣಸಿಗುತ್ತದೆಯಂತೆ. ಮೋರೀಸ್ ಕೂಡಾ ಆತ್ಮವಾಗಿ ಇಲ್ಲೇ ಸುಳಿದಾಡುತ್ತಿದ್ದಾರಂತೆ. ಇದೇ ನಂಬಿಕೆಯ ಕಾರಣದಿಂದ ಯಾರೂ ಈ ಬಂಗಲೆಯತ್ತ ಸುಳಿದಾಡುವ ಧೈರ್ಯ ಮಾಡುವುದಿಲ್ಲ. ಒಂದೊಮ್ಮೆ ಬಂದರೂ ಮುಕ್ತಿ ಕೋಟರಿ ಪಕ್ಕ ಹೋಗುವುದೇ ಇಲ್ಲ…!

ಮೋರೀಸ್ ಪ್ರಯೋಗದ ಬಗ್ಗೆ ಜನ ಇಲ್ಲಿ ಈಗಲೂ ಮಾತನಾಡುತ್ತಾರೆ. ಈಗಿನ ವೃದ್ಧರು ಅವರು ಚಿಕ್ಕದಾಗಿರುವಾಗ ಕೇಳಿದ ಕತೆಗಳನ್ನೂ ಹೇಳುತ್ತಾರೆ. ಹೀಗಾಗಿ, ಇದೇ ಭಯ ಈ ಬಂಗಲೆಯನ್ನು ಭೂತ ಬಂಗಲೆಯನ್ನಾಗಿ ರೂಪಿಸಿರಬಹುದು. ಮೋರೀಸ್ ಜೀವಂತ ವ್ಯಕ್ತಿಗಳ ಮೇಲೆಯೇ ವಿಚಿತ್ರ ಪ್ರಯೋಗಗಳನ್ನು ಮಾಡಿ ಪ್ರಾಣ ಕಸಿಯುತ್ತಿದ್ದುದರಿಂದ ಇವರೆಲ್ಲರ ಆತ್ಮ ಇಲ್ಲೇ ಸುಳಿದಾಡುತ್ತಿದೆ ಎಂಬ ನಂಬಿಕೆ ಹುಟ್ಟಿಕೊಂಡಿರಬಹುದು. ಇದೇ ಭಯ ಮತ್ತೆ ವಿಭಿನ್ನ ವಿಭಿನ್ನ ಕತೆಗೆ ಕಾರಣವಾಗಿರಬಹುದು. ಈ ಇಡೀ ಸನ್ನಿವೇಶ ನಡೆದು ನೂರು ವರ್ಷಗಳಷ್ಟು ಕಳೆದಿದೆ. ಆದರೆ, ಭಯವಂತೂ ಖಂಡಿತಾ ದೂರವಾಗಿಲ್ಲ. ಈಗಲೂ ಜನ ಡಾಕ್ಟರ್ ಮೋರೀಸ್ ಹೆಸರು ಕೇಳಿದ ತಕ್ಷಣ ಭಯಗೊಳ್ಳುತ್ತಾರೆ…! ಹಾಗಂತ, ಇಲ್ಲಿ ವಿಚಿತ್ರ ಧ್ವನಿ ಕೇಳಿದವರು ಅಥವಾ ಆತ್ಮಗಳನ್ನು ಕಂಡವರು ಇಲ್ಲ. ಒಬ್ಬರಿಂದ ಒಬ್ಬರಿಗೆ ಈ ಕತೆ ದಾಟಿ ಬಂದಿದೆ ಬಿಟ್ಟರೆ ಹೇಳುವಂತಹ `ಭೀಕರ’ ಸನ್ನಿವೇಶ ಈಗ ಇಲ್ಲಿಲ್ಲ. ಈ ಬಂಗಲೆಯ ಪಕ್ಕ ಹೋದವರು ಯಾರೂ ಮರಳಿ ಜೀವಂತ ಬರುವುದಿಲ್ಲ ಎಂದೂ ಹೇಳುವವರಿದ್ದಾರೆ. ಅಂತಹ ಸನ್ನಿವೇಶವೂ ಇಲ್ಲಿಲ್ಲ. ಆದರೆ, ಹಲವಾರು ದಶಕಗಳಿಂದ ಪಾಳು ಬಿದ್ದ ಕಟ್ಟಡ ಹೊರನೋಟಕ್ಕೆ ಭೀಕರವಾಗಿಯೇ ಕಾಣುತ್ತದೆ. ಹೀಗಾಗಿಯೇ, ಇದು ಭೂತ ಬಂಗಲೆಯ ಹೆಸರನ್ನು ಪಡೆದಿರಬಹುದು. ದೇಶದ ಅತೀ ಭಯಾನಕ ಸ್ಥಳಗಳಲ್ಲಿ ಸ್ಥಾನ ಪಡೆದಿರಬಹುದು.