
ಬಾಗಲಕೋಟೆ/ವಿಜಯಪುರ: ಪಶ್ಚಿಮ ಘಟ್ಟ ಮತ್ತು ಕೃಷ್ಣಾ ನದಿ ಜಲಾನಯದ ಪ್ರದೇಶಗಳಲ್ಲಿ ಭಾರೀ ಮಳೆಯಾಗಿರುವುದರಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ(ಆಲಮಟ್ಟಿ ಅಣೆಕಟ್ಟು) ಉಕ್ಕಿ ಹರಿಯುತ್ತಿದೆ.

ಶುಕ್ರವಾರ ಕೃಷ್ಣಾ ಜಲ ಭಾಗ್ಯ ನಿಗಮ ನಿಯಮಿತದ ಅಧಿಕಾರಿಗಳು ಅಣೆಕಟ್ಟೆಗೆ 2 ಲಕ್ಷ 5 ಸಾವಿರದ 832 ಕ್ಯೂಸೆಕ್ ನೀರು ಹರಿದು ಬಂದಿದ್ದು, ಹೊರಹರಿವು 2 ಲಕ್ಷದ 30 ಸಾವಿರದ 207 ಕ್ಯೂಸೆಕ್ಸ್ ದಾಖಲಾಗಿತ್ತು ಎಂದಿದ್ದಾರೆ. ಕಳೆದ ಮೂರು ದಿನಗಳಲ್ಲಿ ಜಲಾಶಯದ ಎಲ್ಲಾ 26 ಕ್ರೆಸ್ಟ್ ಗೇಟ್ಗಳಿಂದ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಆಲಮಟ್ಟಿ ಅಣೆಕಟ್ಟಿನಿಂದ 40 ಕಿಲೋ ಮೀಟರ್ ದೂರದಲ್ಲಿರುವ ನಾರಾಯಣಪುರ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ನಾರಾಯಣಪುರ ಜಲಾಶಯದಲ್ಲಿ ಕೂಡ ನೀರು ನಿಗದಿತ ಮಟ್ಟ ತಲುಪಿದ್ದು 2 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗುತ್ತಿದೆ.

ನಿನ್ನೆ ಆಲಮಟ್ಟಿ ಅಣೆಕಟ್ಟಿನಲ್ಲಿ 103.76 ಟಿಎಂಸಿ ನೀರು ಸಂಗ್ರಹವಾಗಿತ್ತು. ಇದರ ಒಟ್ಟು ಸಾಮರ್ಥ್ಯ 123 ಟಿಎಂಸಿ. ಪ್ರತಿದಿನ ಕೆಪಿಟಿಸಿಎಲ್ ಸುಮಾರು 250 ಮೆಗಾವ್ಯಾಟ್ ವಿದ್ಯುತ್ನ್ನು 6 ವಿದ್ಯುತ್ ಉತ್ಪಾದನಾ ಘಟಕಗಳಿಂದ ಉತ್ಪಾದನೆ ಮಾಡುತ್ತದೆ.









