
ಕಾಂಗ್ರೆಸ್ ಸಾಮಾಜಿಕ ಜಾಲ ತಾಣ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರ ಟ್ವಿಟ್ಟರ್ ಖಾತೆಯಲ್ಲಿನ ಎಲ್ಲಾ ಟ್ವೀಟ್ ಡಿಲೀಟ್ ಆಗಿವೆ. ಸದ್ಯ ಅವರ ಖಾತೆಯನ್ನು ನಿಷ್ಕ್ರಿಯ ಮಾಡಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷವಾಗಲಿ, ರಮ್ಯಾ ಅವರಾಗಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಹೀಗಾಗಿ, ದಿವ್ಯಸ್ಪಂದನ ಅವರ ಖಾತೆ ಹುಡುಕಿದರೂ ಸಿಗುತ್ತಿಲ್ಲ. ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದು, ಮೋದಿ ಹಾಗೂ ಈ ಹಿಂದಿನ ಮೋದಿ ಸರ್ಕಾರದ ವಿರುದ್ಧ ನಿರಂತವಾಗಿ ವೈಯಕ್ತಿಕ ದಾಳಿ ನಡೆಸುತ್ತಾ ಬಂದಿದ್ದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 52 ಸ್ಥಾನ ಮಾತ್ರ ಗಳಿಸಿ ಸೋಲೊಪ್ಪಿಕೊಂಡ ಬಳಿಕ, ರಮ್ಯಾ ಅವರ ಟ್ವಿಟ್ಟರ್ ಖಾತೆ ಅಷ್ಟು ಸಕ್ರಿಯವಾಗಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ, ಸಂಸದರ ವಿರುದ್ಧ ಟ್ವೀಟ್ ಮಾಡಿ, ಹಲವು ಬಾರಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಕಾಂಗ್ರೆಸ್ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ತಮ್ಮ ಟ್ವೀಟರ್ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ.
ಸದ್ಯ ರಮ್ಯಾ ಖಾತೆ ಸಿಗುತ್ತಿಲ್ಲ, ರಮ್ಯಾ ಖಾತೆಯಲ್ಲಿ ಶೂನ್ಯ ಸಂದೇಶ, ಶೂನ್ಯ ಹಿಂಬಾಲಕರು ಎಂಬ ಸ್ಕ್ರೀನ್ ಶಾಟ್ ಗಳು ಹಂಚಿಕೆಯಾಗುತ್ತಿವೆ. ಯಾವ ಕಾರಣದಿಂದಾಗಿ ಸಂದೇಶಗಳನ್ನು ಅಳಿಸಿಹಾಕಿದ್ದಾರೆ, ಇದೇನು ಉದ್ದೇಶಿತ ಕೃತ್ಯವೇ ಅಥವಾ ತಾಂತ್ರಿಕ ದೋಷವೇ ಏನು ಸ್ಪಷ್ಟನೆ ಇಲ್ಲ. ರಮ್ಯಾ ಅವರು ತಮ್ಮ ಹುದ್ದೆಯನ್ನು ತೊರೆದಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ.









