ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ : ತಾಯಿಯ ನಂತರ ಮಗುವಿನ ಬದುಕನ್ನು ಹೆಚ್ಚು ಪ್ರಭಾವಿಸುವ ವ್ಯಕ್ತಿ ಎಂದರೆ ಅದು ಶಿಕ್ಷಕ: ಡಾ. ಮಮತಾ ಕೆ – ಕಹಳೆ ನ್ಯೂಸ್

ಸುಳ್ಯ : ಶಿಕ್ಷಕ ವೃತ್ತಿಯು ಅತ್ಯಂತ ಅಮೂಲ್ಯವಾದುದು. ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಕಾಣದಂತೆ ನಿಂತಿರುವ ಶಕ್ತಿ ಶಿಕ್ಷಕರದು. ತಾಯಿಯ ನಂತರ ಮಗುವಿನ ಬದುಕನ್ನು ಹೆಚ್ಚು ಪ್ರಭಾವಿಸುವ ವ್ಯಕ್ತಿ ಎಂದರೆ ಅದು ಶಿಕ್ಷಕ.ಶಿಕ್ಷಕರು ಕೇವಲ ಪಾಠವನ್ನು ಬೋಧಿಸುವವರಲ್ಲ; ಅವರು ವಿದ್ಯಾರ್ಥಿಗಳ ಜ್ಞಾನ, ವ್ಯಕ್ತಿತ್ವ, ಮೌಲ್ಯಗಳು ಮತ್ತು ಭವಿಷ್ಯವನ್ನು ರೂಪಿಸುವ ಮಾರ್ಗದರ್ಶಕರು ಎಂದು ಕಾಲೇಜಿನ ನ್ಯಾಕ್ ಸಂಯೋಜಕಿ ಡಾ. ಮಮತಾ ಕೆ ಇವರು ಸೆಪ್ಟೆಂಬರ್ 5 ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನರವರ ಜನ್ಮದಿನದ ಸ್ಮರಣಾರ್ಥ ಏರ್ಪಡಿಸುವ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಂತರ ಶಿಕ್ಷಕ ದಿನಾಚರಣೆಯ ನೆನಪಿನ ದ್ಯೋತಕವಾಗಿ ಕಾಲೇಜಿನ ಎಲ್ಲಾ ಉಪನ್ಯಾಸಕ ಉಪನ್ಯಾಸಕೇತರ ವೃಂದದವರಿಗೆ ಲೇಖನಿಯನ್ನು ಉಡುಗೊರೆಯಾಗಿ ನೀಡಿದರು.
ಕಾಲೇಜು ಎನ್.ಸಿ.ಸಿ ಘಟಕದ ಅಧಿಕಾರಿ ಕ್ಯಾಪ್ಟನ್ ಸೀತಾರಾಮ ಎಂ ಡಿ ಮತ್ತು ಕಾಲೇಜಿನ ನೂತನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಧರ್ ವಿ ಈ ಸಂದರ್ಭದಲ್ಲಿ ಎಲ್ಲರಿಗೂ ಸಿಹಿ ಹಂಚಿ ಶುಭಹಾರೈಸಿದರು. ಉಪನ್ಯಾಸಕರಾದ ಕುಲದೀಪ್ ಪೆಲ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಎಲ್ಲರೂ ನಮ್ಮ ದೇಶದ ಮಹಾನ್ ಶಿಕ್ಷಣ ತಜ್ಞ ಹಾಗೂ ತತ್ವಜ್ಞಾನಿ ಡಾ. ಸರ್ವಪಲ್ಲಿ ರಾಧಾಕೃಷ್ಣರವರ ಭಾವಚಿತ್ರಕ್ಕೆ ನಮಿಸಿ ತರಗತಿಗಳಿಗೆ ತೆರಳಲಾಯಿತು.
ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದು ವಿದ್ಯಾರ್ಥಿಗಳು ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.











