Sunday, August 16, 2026
ಸುದ್ದಿ

ಹೂಳಿನಲ್ಲಿ ಸಿಲುಕಿ ಬೋಟ್ ಮುಳುಗಡೆ; ನಾಲ್ವರು ಮೀನುಗಾರರ ರಕ್ಷಣೆ-ಕಹಳೆ ನ್ಯೂಸ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ  ಕುಮಟಾ ತಾಲೂಕಿನ ತದಡಿ ಅಳಿವೆಯಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್‌ವೊಂದು ಹೂಳಿನಲ್ಲಿ ಸಿಲುಕಿ ಮುಳುಗಡೆಯಾಗಿದೆ. ಅದೃಷ್ಟವಶಾತ್ ಬೋಟ್‌ನಲ್ಲಿದ್ದ ನಾಲ್ವರು ಮೀನುಗಾರರನ್ನು ರಕ್ಷಿಸಲಾಗಿದೆ.

ಜಾಹೀರಾತು

ತದಡಿ ಬಂದರಿನಿಂದ ಮೋಹನ್ ಕಿಮಾನಿ ಎಂಬುವರಿಗೆ ಸೇರಿದ ‘ಶ್ರೀದೇವಿ’ ಹೆಸರಿನ ಬೋಟ್‌ ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆ ತದಡಿ ಅಳಿವೆಯಲ್ಲಿನ ಹೂಳಿನಲ್ಲಿ ಸಿಲುಕಿಕೊಂಡಿದೆ. ಇದರಿಂದ ಬೋಟ್‌ನ ತಳಭಾಗಕ್ಕೆ ಹಾನಿಯಾಗಿದ್ದು, ಬಳಿಕ ಅಳಿವೆಯಲ್ಲೇ ಬೋಟ್‌ ಮುಳುಗಡೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬೋಟ್‌ನಲ್ಲಿದ್ದ ನಾಲ್ವರು ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು. ಕೂಡಲೇ ಸ್ಥಳೀಯ ಮೀನುಗಾರರು ನೆರವಿಗೆ ಧಾವಿಸಿ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ.ಬೋಟ್‌ ಮುಳುಗಡೆಯಿಂದ 15 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎನ್ನಲಾಗಿದೆ. ಬೋಟ್‌ನ ಜೊತೆಗೆ ಮೀನುಗಾರಿಕೆಗೆ ಬಳಸುತ್ತಿದ್ದ ಬಲೆ ಸೇರಿದಂತೆ ಹಲವು ವಸ್ತುಗಳು ಕೂಡ ಸಮುದ್ರ ಪಾಲಾಗಿವೆ.

ತದಡಿ ಬಂದರಿನ ಬಳಿ ಹಲವು ವರ್ಷಗಳಿಂದ ಹೂಳು ತುಂಬಿಕೊಂಡಿದೆ. ಇದರಿಂದ ಆಗಾಗ್ಗೆ ಬೋಟ್‌ಗಳು ಹಾನಿಗೊಳಗಾಗುತ್ತಿದ್ದು, ಕೆಲವೊಮ್ಮೆ ಮುಳುಗಡೆಯಾಗುತ್ತಿರುವ ಘಟನೆಗಳೂ ನಡೆಯುತ್ತಿವೆ.

ಹೀಗಾಗಿ ತದಡಿ ಬಂದರಿನಲ್ಲಿರುವ ಹೂಳನ್ನು ಕೂಡಲೇ ತೆರವುಗೊಳಿಸಿ, ಮೀನುಗಾರರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಮೀನುಗಾರರು ಮೀನುಗಾರಿಕಾ ಇಲಾಖೆಯನ್ನು ಒತ್ತಾಯಿಸಿದ್ದಾರೆ.