
ಹಾಸನ: ಪರಿಭಾವಿತ ಅರಣ್ಯ (ಡೀಮ್ಡ್ ಫಾರೆಸ್ಟ್) ಪ್ರದೇಶಕ್ಕೆ ಅಕ್ರಮವಾಗಿ ನುಗ್ಗಿ ಏಳು ಮಹೀಂದ್ರ ಥಾರ್ ಜೀಪ್ಗಳಲ್ಲಿ ಆಫ್ ರೋಡ್ ಸಾಹಸ ನಡೆಸುತ್ತಿದ್ದ ಬೆಂಗಳೂರಿನ ಪ್ರವಾಸಿಗರ ತಂಡದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದು, ಏಳು ಜೀಪ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಿಂದ ಆಗಮಿಸಿದ್ದ ಪ್ರವಾಸಿಗರ ತಂಡವು ಹೊಡಚಳ್ಳಿ ಗ್ರಾಮದ ಸರ್ವೆ ಸಂಖ್ಯೆ 20, 21 ಹಾಗೂ 28ರ ವ್ಯಾಪ್ತಿಯಲ್ಲಿ ಬರುವ ಪರಿಭಾವಿತ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಪಡೆದಿತ್ತು. ಅಲ್ಲಿ ಜೀಪ್ಗಳನ್ನು ಓಡಿಸುವ ಮೂಲಕ ಅರಣ್ಯ, ಪರಿಸರ ಹಾಗೂ ವನ್ಯಜೀವಿಗಳಿಗೆ ತೀವ್ರ ಹಾನಿ ಉಂಟುಮಾಡುತ್ತಿದ್ದರು.
ಈ ಕುರಿತು ಖಚಿತ ಮಾಹಿತಿ ಲಭಿಸುತ್ತಿದ್ದಂತೆ ಸಕಲೇಶಪುರ ವಲಯ ಅರಣ್ಯಾಧಿಕಾರಿ ನೇತೃತ್ವದ ಅಧಿಕಾರಿಗಳಾದ ಮಂಜುನಾಥ್, ಅರ್ಜುನ್ ಹಾಗೂ ಮಹದೇವಪ್ಪ ಅವರ ತಂಡ ದಾಳಿ ನಡೆಸಿದೆ.
ಅಕ್ರಮವಾಗಿ ಆಫ್ ರೋಡ್ ನಡೆಸುತ್ತಿದ್ದ ಏಳೂ ಮಹೀಂದ್ರ ಥಾರ್ ಜೀಪ್ಗಳನ್ನು ಜಪ್ತಿ ಮಾಡಲಾಗಿದ್ದು, ಪ್ರವಾಸಿಗರ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಏನಿದು ಡೀಮ್ಡ್ ಫಾರೆಸ್ಟ್?
ಸರ್ಕಾರಿ ದಾಖಲೆಗಳಲ್ಲಿ ಅರಣ್ಯವೆಂದು ಅಧಿಕೃತವಾಗಿ ನಮೂದಾಗದಿದ್ದರೂ, ಕಾಡಿನ ಲಕ್ಷಣಗಳನ್ನು (ದಟ್ಟವಾದ ಮರಗಳು ಮತ್ತು ಸಸ್ಯವರ್ಗ) ಹೊಂದಿರುವ ಭೂಪ್ರದೇಶವನ್ನು ಡೀಮ್ಡ್ ಫಾರೆಸ್ಟ್ (ಪರಿಭಾವಿತ ಅರಣ್ಯ) ಎಂದು ಕರೆಯಲಾಗುತ್ತದೆ. ಭೂಮಿಯ ಮಾಲೀಕತ್ವ ಏನೇ ಇರಲಿ, ದಟ್ಟ ಮರಗಳನ್ನು ಹೊಂದಿರುವ ಪ್ರದೇಶಗಳನ್ನು ಈ ವರ್ಗಕ್ಕೆ ಸೇರಿಸಲಾಗುತ್ತದೆ.











