ಜು. 29ರಿಂದ ಸೆ. 26ರ ತನಕ 60ದಿನಗಳ ಎಡನೀರು ಶ್ರೀಗಳ ಚಾತುರ್ಮಾಸ್ಯ ಆಚರಣೆ: ಧಾರ್ಮಿಕ ಕಲೋತ್ಸವ ಪರಂಪರೆ ಮುಂದುವರಿಯಬೇಕು-ಎಡನೀರು ಶ್ರೀ- ಕಹಳೆ ನ್ಯೂಸ್

ಶ್ರೀ ಶಂಕರಾಚಾರ್ಯ ಶಿಷ್ಯ ಶ್ರೀತೋಟಕಾಚಾರ್ಯ ಪರಂಪರೆಯ ಶ್ರೀಮದೆಡನೀರು ಮಠಾಧೀಶ ಶ್ರೀ ಸಚ್ಛಿದಾನಂದ ಭಾರತೀ ಮಹಾಸ್ವಾಮಿಗಳವರ ಆರನೇ ಚಾತುರ್ಮಾಸ್ಯ ಜುಲೖ 29ರಿಂದ ಸೆ. 26ರ ತನಕ 60ದಿನಗಳ ಧಾರ್ಮಿಕ ಮಹೋತ್ಸವ ಸ್ವರೂಪದಲ್ಲಿ ನಡೆಯಲಿದೆ. ವೖದಿಕ, ಧಾರ್ಮಿಕ, ಕಲಾ ಸಾಂಸ್ಕೃತಿಕ ಸಮ್ಮಿಲನದೊಂದಿಗೆ ನಡೆಯುವ ಚಾತುರ್ಮಾಸ್ಯ ವ್ರತಾಚರಣೆಯ ಯಶಸ್ವಿಗೆ ಶ್ರೀ ಮಠದಲ್ಲಿ ಆದಿತ್ಯವಾರ ಸ್ವಾಗತ ಸಮಿತಿ ಸಭೆ ಜರುಗಿತು.
ಪೂರ್ವಭಾವಿ ಸಮಾಲೋಚನೆ ಹಾಗೂ ಸಿದ್ಧತಾ ಸಭೆಯಲ್ಲಿ ಆಶೀರ್ವಚನ ನೀಡಿದ ಎಡನೀರು ಶ್ರೀಗಳು ಶ್ರೀಮಠದ ಪರಂಪರೆಯಂತೆ ಹೋಮ, ಹವನಾದಿ ವೖದಿಕ, ಧಾರ್ಮಿಕ ಸಂಸ್ಕೃತಿ ಆರಾಧನೆಯೊಂದಿಗೆ ಕಲಾರಾಧನಾ ಮೂಲಕ ಈ ಬಾರಿಯ ಚಾತುರ್ಮಾಸ್ಯ ನಡೆಯಲಿದೆ. ಶ್ರೀಮಠದ ಈ ಪ್ರಕ್ರಿಯೆ ಕಾಸರಗೋಡಿನಲ್ಲಿ ಎರಡು ತಿಂಗಳ ಧಾರ್ಮಿಕ ಕಲೋತ್ಸವವನ್ನು ಸೃಷ್ಟಿಸುತ್ತಿದೆ. ಎಲ್ಲೆಡೆಯ ಭಕ್ತರನ್ನು ಶ್ರೀ ಮಠದ ಕಡೆಗೆ ಆಕರ್ಷಿಸಲು ಇದು ಕಾರಣವಾಗಿದೆ. ಈ ಪರಂಪರೆ ಸುಭದ್ರವಾಗಿ ಮುಂದುವರಿಯಬೇಕಿದೆ ಎಂದರು.
ಚಾತುರ್ಮಾಸ್ಯ ಸಮಿತಿಯ ಪ್ರಮುಖರಾದ ಪುತ್ತೂರಿನ ಸ್ವರ್ಣೋದ್ಯಮಿ ಜಿ. ಎಲ್. ಬಲರಾಂ ಆಚಾರ್ಯ ಅಧ್ಯಕ್ಷತೆ ವಹಿಸಿದರು.
ಪ್ರಧಾನ ಅಭ್ಯಾಗತರಾಗಿ ಕರ್ನಾಟಕ ಲೋಕಸೇವಾ ಆಯೋಗದ ಹಂಗಾಮಿ ಅಧ್ಯಕ್ಷ ಡಾ. ಟಿ. ಶ್ಯಾಂ ಭಟ್ ಪಾಲ್ಗೊಂಡರು. ಉದ್ಯಮಿ ಕೆ. ಕೆ. ಶೆಟ್ಟಿ ಪುಣೆ, ಮಧುಸೂಧನ ಆಯರ್ ಮಂಗಳೂರು, ಹಿರಿಯ ನ್ಯಾಯವಾದಿ ಎಂ. ನಾರಾಯಣ ಭಟ್ ಕಾಸರಗೋಡು, ಚೆಂಗಳ ಗ್ರಾ. ಪಂ. ಅಧ್ಯಕ್ಷ ವಸಂತ ಅಜಕ್ಕೋಡು, ಗಂಗಾಧರನ್ ನಾಯರ್ ಉಪಸ್ಥಿತರಿದ್ದು ಮಾತನಾಡಿದರು.
ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿದರು. ಚಾತುರ್ಮಾಸ ಸಮಿತಿ ಕಾರ್ಯದರ್ಶಿ ಕೆಯ್ಯೂರು ನಾರಾಯಣ ಭಟ್ ಪ್ರಾಸ್ತಾವಿಕ ಮಾತನಾಡಿದರು. ಕೆ. ಸೂರ್ಯನಾರಾಯಣ ಭಟ್ ನಿರೂಪಿಸಿ, ವೇಣುಗೋಪಾಲ ಎಡನೀರು ವಂದಿಸಿದರು. ಸರೋಜ ಭಟ್ ಪ್ರಾರ್ಥನೆ ಹಾಡಿದರು.











