ಎನ್.ಎಂ.ಸಿ. ನೇಚರ್ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ : ಜೀವಸಿರಿ ನರ್ಸರಿ ಯೋಜನೆಗೆ ಚಾಲನೆ – ಕಹಳೆ ನ್ಯೂಸ್

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನೆಹರು ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ, ಜೀವವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯಲ್ಲಿ “Green Guardians: Sapling Production Initiative – ಜೀವಸಿರಿ ನರ್ಸರಿ ಯೋಜನೆ”ಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ದಿನಾಂಕ 05-06-2026 ರಂದು ಬೆಳಿಗ್ಗೆ 10.00 ಗಂಟೆಗೆ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಪರಿಸರ ಸಂರಕ್ಷಣೆ ಹಾಗೂ ಹಸಿರು ಪರಿಸರ ನಿರ್ಮಾಣದ ಮಹತ್ವವನ್ನು ತಿಳಿಸುವ ಸಂದೇಶದೊಂದಿಗೆ ಅತಿಥಿಗಳನ್ನು ಸ್ವಾಗತಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಶೋಭಾ ಎ. ಅವರು ಗಿಡ ನೆಡುವ ಮೂಲಕ ಯೋಜನೆಗೆ ಅಧಿಕೃತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಲೇಜು ಆವರಣದಲ್ಲಿ ಹಸಿರು ವಾತಾವರಣ ನಿರ್ಮಾಣಕ್ಕೆ ಜೀವ ಸಿರಿ ಯೋಜನೆಯು ಮಹತ್ವದ ಕೊಡುಗೆ ನೀಡಿದ್ದು, ವಿಶ್ವ ಪರಿಸರ ದಿನಾಚರಣೆಯು ಈ ಕಾರ್ಯಕ್ರಮದ ಮೂಲಕ ಅರ್ಥಪೂರ್ಣವಾಗಿದೆ. ಜೀವಸಿರಿ ನರ್ಸರಿ ಯೋಜನೆ, ವಿದ್ಯಾರ್ಥಿಗಳ ಕೈಯಲ್ಲಿ ಹಸಿರು ಭವಿಷ್ಯದ ಬೀಜ ಬಿತ್ತುವ ಯಶಸ್ವಿ ಪ್ರಯತ್ನ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕಿ ಡಾ. ಮಮತಾ ಕೆ. ಅವರು ಎರಡು ಅಲಂಕಾರಿಕ ಗಿಡಗಳನ್ನು ಖರೀದಿಸುವ ಮೂಲಕ ಯೋಜನೆಗೆ ಬೆಂಬಲ ಸೂಚಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಗಿಡ ನೆಡುವುದರಲ್ಲಿ ಸೀಮಿತರಾಗದೆ, ಅವುಗಳ ಆರೈಕೆ, ಪೋಷಣೆ ಹಾಗೂ ಸಂರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. “ಜೀವಸಿರಿ” ನರ್ಸರಿ ಯೋಜನೆಯು ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುವುದರ ಜೊತೆಗೆ, ಸ್ವಾವಲಂಬನೆ ಹಾಗೂ ಉದ್ಯಮಶೀಲತೆಯ ಗುಣಗಳನ್ನು ಬೆಳೆಸುವ ವಿಶಿಷ್ಟ ಕಾರ್ಯಕ್ರಮವಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯು ಮತ್ತಷ್ಟು ವಿಸ್ತರಿಸಿ ಮಾದರಿ ಯೋಜನೆಯಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಂಗವಾಗಿ ಜೀವವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಭ್ಯವಿದ್ದ ವಿವಿಧ ಬಗೆಯ ಅಲಂಕಾರಿಕ ಸಸ್ಯಗಳು, ಗೆಲ್ಲುಗಳು, ಹೂಗಿಡಗಳು ಮತ್ತು ಪುಟ್ಟ ಗಿಡಗಳನ್ನು ತಂದು, ಪಾಟ್ಗಳಲ್ಲಿ ಮರುನಾಟಿ ಮಾಡಿ ಅವುಗಳ ಸಂರಕ್ಷಣೆ ಹಾಗೂ ಬೆಳವಣಿಗೆಯ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು. ಗಿಡಗಳ ಮಹತ್ವ, ಅವುಗಳ ಉಪಯೋಗಗಳು ಮತ್ತು ನಗರೀಕರಣದ ನಡುವೆ ಹಸಿರು ಪರಿಸರದ ಅಗತ್ಯತೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.
ನೇಚರ್ ಕ್ಲಬ್ ಸಂಚಾಲಕರಾದ ಕುಲದೀಪ್ ಪೆಲತಡ್ಕ ಪ್ರಸ್ತಾವಿಕವಾಗಿ ಮಾತನಾಡಿ “ಜೀವಸಿರಿ ನರ್ಸರಿ ಯೋಜನೆ”ಯ ಪ್ರಮುಖ ಉದ್ದೇಶ ವಿದ್ಯಾರ್ಥಿಗಳಲ್ಲಿ ಗಿಡಗಳ ಮೇಲಿನ ಪ್ರೀತಿ, ಪರಿಸರ ಸಂರಕ್ಷಣೆಯ ಜವಾಬ್ದಾರಿ ಮತ್ತು ನರ್ಸರಿ ನಿರ್ವಹಣೆಯ ಪ್ರಾಯೋಗಿಕ ಜ್ಞಾನವನ್ನು ಬೆಳೆಸುವುದಾಗಿದೆ. ವಿದ್ಯಾರ್ಥಿಗಳು ತಾವು ಬೆಳೆಸಿದ ಗಿಡಗಳನ್ನು ಮುಂದಿನ ದಿನಗಳಲ್ಲಿ ವಿತರಿಸುವ ಹಾಗೂ ಮಾರಾಟ ಮಾಡುವ ಮೂಲಕ ಪರಿಸರ ಜಾಗೃತಿಯ ಜೊತೆಗೆ ಸ್ವಾವಲಂಬನೆಯತ್ತ ಹೆಜ್ಜೆ ಇಡಲು ಪ್ರೇರೇಪಿಸುವುದು ಈ ಯೋಜನೆಯ ವಿಶೇಷತೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಈ ಯೋಜನೆಯ ರೂವಾರಿಗಳಾದ ಜೀವವಿಜ್ಞಾನ ವಿಭಾಗದ ಉಪನ್ಯಾಸಕರಾದ ಕೃತಿಕಾ ಕೆ ಜೆ, ಪಲ್ಲವಿ ಕೆ, ಜಿತೇಶ್ ಜಿ ಹೆಚ್, ಭಾವನಾ ಕೆ ಮತ್ತು ಅಭಿಜ್ಞಾ, ನೇಚರ್ ಕ್ಲಬ್ನ ಪದಾಧಿಕಾರಿಗಳು, ಆಂಗ್ಲಭಾಷಾ ವಿಭಾಗ ಮುಖ್ಯಸ್ತೆ ಭವ್ಯ ಪಿ ಎಂ, ವಾಣಿಜ್ಯಶಾಸ್ತ್ರ ಉಪನ್ಯಾಸಕ ಶ್ರೀಧರ್ ವಿ ಮತ್ತು ವಿವಿಧ ವಿಭಾಗಗಳ ಅಧ್ಯಾಪಕರು, ಗಾರ್ಡನರ್ ಸೀತಾರಾಮ ರಾವ್, ನೇಚರ್ ಕ್ಲಬ್ ಸದಸ್ಯರು ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.











