ಡಿಕೆ ಶಿವಕುಮಾರ್ಗೆ ಅಧಿಕಾರ ಸಿಕ್ಕರೆ ನನಗೆ ಸಿಕ್ಕಹಾಗೇ :ಮಂಡ್ಯ ಜಿಲ್ಲೆಗೆ 2 ಸಚಿವ ಸ್ಥಾನದ ಬೇಡಿಕೆಯಿಟ್ಟ ಗಣಿಗ ರವಿಕುಮಾರ್ -ಕಹಳೆ ನ್ಯೂಸ್

ಮಂಡ್ಯ: ಡಿಕೆ ಶಿವಕುಮಾರ್ಗೆ ಅಧಿಕಾರ ಸಿಕ್ಕರೆ ನನಗೆ ಸಿಕ್ಕಹಾಗೇ. ಮಂಡ್ಯ ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಗಲಿ ಎಂಬುದು ನನ್ನ ಬೇಡಿಕೆ ಎಂದು ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 40 ವರ್ಷದ ಪರಿಶ್ರಮಕ್ಕೆ ಫಲ ಸಿಕ್ಕಿದೆ. ನನ್ನ ಕಷ್ಟ ಕಾಲದಲ್ಲಿ ಡಿಕೆಶಿ ನನ್ನೊಂದಿಗಿದ್ದರು. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿರುವುದು ಖುಷಿ ತಂದಿದೆ. ಸಿದ್ದರಾಮಯ್ಯ ಒಂದು ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದ್ದಾರೆ. ಅದನ್ನೇ ಡಿಕೆಶಿ ಕೂಡ ಮುಂದುವರಿಸಿಕೊಂಡು ಹೋಗುತ್ತಾರೆ. ಇಷ್ಟು ದಿನ ವಿರೋಧ ಪಕ್ಷಗಳು ಸಿದ್ದರಾಮಯ್ಯ ಆಡಳಿತ ಸರಿಯಿಲ್ಲ ಎನ್ನುತ್ತಿದ್ದರು. ಈಗ ಸಿದ್ದರಾಮಯ್ಯಗೆ ಅನ್ಯಾಯ ಆಗಿದೆ ಎನ್ನುತ್ತಿದ್ದಾರೆ. ವಿರೋಧ ಪಕ್ಷಗಳದ್ದು ಡಬಲ್ ಸ್ಟ್ಯಾಂಡರ್ಡ್. ನಾಯಕತ್ವ ಬದಲಾವಣೆ ವಿಚಾರದಲ್ಲಿ ಅವರಂತೆ ನಮ್ಮಲ್ಲೂ ಜಗಳ ಆಗುತ್ತೆ ಎಂದು ನಿರೀಕ್ಷಿಸಿದ್ದರು. ಆದರೆ ನಮ್ಮಲ್ಲಿ ಸ್ಮೂತ್ ಆಗಿ ಅಧಿಕಾರ ಹಸ್ತಾಂತರ ಆಗಿದೆ ಎಂದರು.
ನಮಗೆ ಸಚಿವಸ್ಥಾನದ ಮೇಲೆ ಆಸೆ ಇಲ್ಲ. ನಾನು ಮೊದಲ ಬಾರಿ ಗೆದ್ದಿದ್ದೇನೆ. ಹಿರಿಯರಿಗೆ ಅವಕಾಶ ಸಿಗಲಿ, ಆದರೆ ಅರ್ಹ ಹೊಸಬರಿಗೂ ಅವಕಾಶ ಸಿಗಬೇಕು. ಅಶೋಕ್ ರೈ, ಶಿವಗಂಗಾ ಬಸವರಾಜು, ಭರತ್ ರೆಡ್ಡಿ, ಪ್ರದೀಪ್ ಈಶ್ವರ್ ಅಂತ ಹೊಸಬರಿಗೆ ಅವಕಾಶ ಸಿಗಲಿ. ನನ್ನ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಸಿಕ್ಕಿದೆ, ನಾನಿನ್ನು ಕ್ಷೇತ್ರಕ್ಕೆ ಕೆಲಸ ಮಾಡಬೇಕು. ಸಚಿವರಾಗಿ ಚಲುವರಾಯಸ್ವಾಮಿ ಉತ್ತಮ ಕೆಲಸ ಮಾಡಿದ್ದಾರೆ. ನರೇಂದ್ರ ಸ್ವಾಮಿಗೆ ಬೇರೆ ಕೋಟಾ ಇದೆ. ಆದರೆ ರಮೇಶ್ ಬಂಡೀಸಿದ್ದೇಗೌಡ 3 ಬಾರಿ ಗೆದ್ದಿದ್ದಾರೆ. ಅವರ ತಂದೆ ತಾಯಿ ಕೂಡ ಶಾಸಕರಾಗಿ ಕೆಲಸ ಮಾಡಿದ್ದಾರೆ. ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಸಿಕ್ಕರೆ ಇನ್ನಷ್ಟು ಅಭಿವೃದ್ಧಿ ಆಗಲಿದೆ ಎಂದು ಹೇಳಿದರು.











