Monday, May 18, 2026
ಸುದ್ದಿ

ಶಾಲೆಯಲ್ಲಿ ಹಾಜರಾತಿ ವೇಳೆ ‘Yes Sir’ ಬದಲು ಜೈ ಶ್ರೀರಾಮ್ ಅಂತ ಹೇಳಿ: ವಿದ್ಯಾರ್ಥಿಗಳಿಗೆ ಯತ್ನಾಳ್ ಕರೆ -ಕಹಳೆ ನ್ಯೂಸ್

ವಿಜಯಪುರ: ಜೂನ್‌ನಲ್ಲಿ ಶಾಲೆಗಳು ಆರಂಭವಾದ ಬಳಿಕ ಪ್ರತಿಯೊಬ್ಬರಿಗೂ ಕೇಸರಿ ಶಾಲು ವಿತರಣೆ ಮಾಡುತ್ತೇನೆ. ಇನ್ಮುಂದೆ ಶಾಲೆಯಲ್ಲಿ ಹಾಜರಾತಿ ಹಾಕುವ ವೇಳೆ ‘ಎಸ್ ಸರ್’ ಎನ್ನುವ ಬದಲು ಜೈ ಶ್ರೀರಾಮ್ ಅಂತ ಹೇಳಿ. ಶಿಕ್ಷಕರಿಗೆ ನಮಸ್ಕರಿಸುವಾಗ ಜೈ ಶ್ರೀರಾಮ್ ಎನ್ನಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್   ಕರೆ ಕೊಟ್ಟಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಪುನಃ ಹಿಜಬ್ ಧರಿಸಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಅವರು ಹರಿಹಾಯ್ದಿದ್ದಾರೆ. ಕೇಸರಿ ಶಾಲು ಧರಿಸುವುದಕ್ಕೆ ನಿಷೇಧ ಹೇರಲು ಕಾಂಗ್ರೆಸ್ಸಿನವರಿಗೆ ಅಧಿಕಾರ ಕೊಟ್ಟವರು ಯಾರು? ಕೇಸರಿ ಶಾಲು ಹಾಕಲು ನಮಗೆ ಹಕ್ಕಿದೆ. ರಾಜ್ಯದ ಎಲ್ಲಾ ಹಿಂದೂಗಳಿಗೆ ಕರೆ ಕೊಡುತ್ತಿದ್ದೇನೆ. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ತಿಲಕ ಇಟ್ಟು ಕೇಸರಿ ಶಾಲು ಹಾಕಿ ಶಾಲೆಗೆ ಕಳುಹಿಸಿ. ಇವರು ಹೇಗೆ ವಿರೋಧ ಮಾಡುತ್ತಾರೆ? ಹೇಗೆ ತಡೆಯುತ್ತಾರೆ? ನಾವು ನೋಡುತ್ತೇವೆ ಎಂದು ಸವಾಲು ಹಾಕಿದರು.

ಮಧ್ಯಪ್ರಾಚ್ಯದಲ್ಲಿನ ತೈಲ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಗೆ ಕಾಂಗ್ರೆಸ್‌ನವರ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರೇ ಬಿಜೆಪಿ ಸರ್ಕಾರ ಇದ್ದಾಗ ತಮಿಳುನಾಡಿನಲ್ಲಿ ಸ್ಟಾಲಿನ್ ಬೆಲೆ ಇಳಿಕೆ ಮಾಡಿದ್ದಾರೆ. ಹಾಗೆಯೇ ಬಿಜೆಪಿ ಸರ್ಕಾರವೂ ಇಳಿಕೆ ಮಾಡಬೇಕು ಅಂತ ಟ್ವೀಟ್ ಮಾಡಿದ್ದರು. ಈಗ ದಮ್ ಇದ್ದರೆ ಇವರು ಕಡಿಮೆ ಮಾಡಿ ತೋರಿಸಲಿ. ಅಂತರರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ನಡೆಯುತ್ತಿರುವ ಅನಿವಾರ್ಯ ಕಾರಣಕ್ಕೆ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಅವರು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಾನು ವೈಯಕ್ತಿಕವಾಗಿ ವಾಹನ ಬಳಕೆ ಕಡಿಮೆ ಮಾಡಿಕೊಳ್ಳುತ್ತೇನೆ. ನೂರಕ್ಕೆ ನೂರರಷ್ಟು ಮಾಡಿಕೊಳ್ಳುವುದಿಲ್ಲ. ಸುಮ್ಮನೇ ವಿಜಯೇಂದ್ರನಂತೆ ನಾಟಕ ಮಾಡುವುದಿಲ್ಲ. ಎಲ್ಲಿಯವರೆಗೆ ಪ್ರಧಾನ ಮಂತ್ರಿಗಳು ಬಂಗಾರ ತೆಗೆದುಕೊಳ್ಳಬೇಡಿ ಅಂತ ಹೇಳುತ್ತಾರೆಯೋ? ಅಲ್ಲಿಯವರೆಗೆ ಒಂದು ಗುಂಜಿ ಬಂಗಾರ ಕೂಡ ಖರೀದಿಸುವುದಿಲ್ಲ ಎಂದು ಮೋದಿಯವರ ಮಿತವ್ಯಯ ಕರೆಗೆ ಸಹಮತ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿರುವ ಶೇ.30 ರಷ್ಟು ತೆರಿಗೆಯನ್ನು ಶೇ. 20ಕ್ಕೆ ಇಳಿಸಲಿ. ಮೊನ್ನೆ ಇವರು ಕರೆಂಟ್ ಬಿಲ್ ಹೆಚ್ಚಳ ಮಾಡಿದ್ದಾರೆ ತಾನೇ? ಮರಣ ಪ್ರಮಾಣಪತ್ರದ ಸ್ಟಾಂಪ್ ಡ್ಯೂಟಿಯನ್ನು ನೀವು ಯಾಕೆ ಏರಿಕೆ ಮಾಡಿದ್ದೀರಿ. ರಾಜ್ಯದಲ್ಲಿ ನೀವು ಯಾವುದು ಕಡಿಮೆ ಮಾಡಿದ್ದೀರಿ ಹೇಳಿ? ಹಾಗಾಗಿ, ಕಾಂಗ್ರೆಸಿನವರಿಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.