ನಾಳೆ ಪಿಎಂ ಮೋದಿ ಉದ್ಘಾಟಿಸಬೇಕಿದ್ದ 79,000 ಕೋಟಿ ಮೌಲ್ಯದ ತೈಲ ಶುದ್ಧೀಕರಣ ಘಟಕಕ್ಕೆ ಬೆಂಕಿ – ಕಹಳೆ ನ್ಯೂಸ್

ಜೈಪುರ: ನಾಳೆ (ಏ.21) ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಬೇಕಿದ್ದ ತೈಲ ಶುದ್ಧೀಕರಣ ಘಟಕಕ್ಕೆ ಬೆಂಕಿ ಬಿದ್ದಿದೆ.
ರಾಜಸ್ಥಾನದ ಬಲೋತ್ರದಲ್ಲಿ 79,000 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿಪಡಿಸಿದ್ದ ಅತ್ಯಾಧುನಿಕ ತಂತ್ರಜ್ಞಾನದ ಹಾಗೂ ಸುಸಜ್ಜಿತ ತೈಲ ಶುದ್ಧೀಕರಣ ಘಟಕ ಇದಾಗಿದೆ. ಈ ಪಚಪದ್ರಾ ತೈಲ ಶುದ್ಧೀಕರಣ ಘಟಕವು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಹಾಗೂ ರಾಜಸ್ಥಾನ ಸರ್ಕಾರದ ಜಂಟಿ ಉದ್ಯಮವಾಗಿದೆ.
ಭಾರತದಲ್ಲಿ 23 ತೈಲ ಶುದ್ಧೀಕರಣ ಘಟಕಗಳಿವೆ. ಈ ಪೈಕಿ ರಾಜಸ್ಥಾನದಲ್ಲಿ ಉದ್ಘಾಟನೆಯಾಗಬೇಕಿದ್ದ ಈ ರಿಫೈನರಿ ಘಟಕ ಅತ್ಯಾಧುನಿಕ ಘಟಕವಾಗಿತ್ತು. ಬರೋಬ್ಬರಿ 41 ದೇಶಗಳಿಂದ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತದೆ. ಬಳಿಕ ಭಾರತದಲ್ಲಿ ಶುದ್ಧೀಕರಣ ಮಾಡಲಾಗುತ್ತದೆ. ಬಲೋತ್ರದಲ್ಲಿರುವ ಈ ತೈಲ ಶುದ್ಧೀಕರಣ ಘಟಕ ನೇರವಾಗಿ ಮುದ್ರಾ ಬಂದರಿಗೆ ಸಂಪರ್ಕಹೊಂದಿದೆ. ಹೀಗಾಗಿ ಸಾಗಣೆ, ಪೂರೈಕೆಯಲ್ಲೂ ಭಾರತಕ್ಕೆ ಹೆಚ್ಚಿನ ಲಾಭಗಳಿವೆ. ಅಷ್ಟೇ ಅಲ್ಲ ಈ ಘಟಕದಿಂದ ವಾರ್ಷಿಕವಾಗಿ ರಾಜಸ್ಥಾನ ಸರ್ಕಾರಕ್ಕೆ 5,000 ಕೋಟಿ ರೂ. ಆದಾಯದ ನಿರೀಕ್ಷೆ ಇದೆ.
ಘಟಕದಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ದಟ್ಟ ಹೊಗೆ ಆವರಿಸಿರುವುದು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ 20 ಅಗ್ನಿಶಾಮಕ ದಳ ವಾಹನ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಈವರೆಗೆ ಯಾವುದೇ ಸಾವು-ನೋವು ವರದಿಯಾಗಿಲ್ಲ. ರಾಜಸ್ಥಾನದ ಬಲೋತ್ರದಲ್ಲಿರುವ ಈ ತೈಲ ಶುದ್ಧೀಕರಣ ಘಟಕ ಭಾರತದ ಮೊದಲ ಗ್ರೀನ್ ಫೀಲ್ಡ್ ರಿಫೈನರಿ ಎಂದೇ ಗುರುತಿಸಿಕೊಂಡಿದೆ.









