ಆಗಮ ಘಟಿಕೋತ್ಸವ 2025 ; ಪಿ.ಜಿ ಜಗನ್ನಿವಾಸ ರಾವ್, ಪೊಳಲಿ ಗಿರಿಪ್ರಕಾಶ್ ತಂತ್ರಿಗಳಿಗೆ ‘ ವಾತುಲಾ ಆಗಮ ಪ್ರವೀಣ ‘ ಪದವಿ ಪುರಸ್ಕಾರ – ಕಹಳೆ ನ್ಯೂಸ್

ಬೆಂಗಳೂರು / ಪುತ್ತೂರು / ಬಂಟ್ವಾಳ : ಕರ್ನಾಟಕ ಸರಕಾರದ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ, ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ದತ್ತಿಗಳ ಇಲಾಖೆ ಇದರ ಆಗಮ ಘಟಿಕೋತ್ಸವ 2025 ಬೆಂಗಳೂರಿನ ಶ್ರೀ ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಏಳು ಆಗಮ ವಿಭಾಗಗಳ ಸುಮಾರು 2000 ವಿದ್ಯಾರ್ಥಿಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ 43 ವಿದ್ಯಾರ್ಥಿಗಳ ಪೈಕಿ ವಾತುಲಾಗಮ ಪ್ರವೀಣ ಪದವಿಯನ್ನು ಪೊಳಲಿ ಗಿರಿಪ್ರಕಾಶ್ ತಂತ್ರಿ ಹಾಗು ಪುತ್ತೂರಿನ ವಾಸ್ತುತಜ್ಞ ಪಿ.ಜಿ ಜಗನ್ನಿವಾಸ ರಾವ್ ರವರಿಗೆ ಕರ್ನಾಟಕ ಸರಕಾರದ ಮುಜರಾಯಿ ಮಂತ್ರಿಗಳಾದ ರಾಮಲಿಂಗ ರೆಡ್ಡಿ ಹಾಗು ಆಯುಕ್ತ ಡಾ.ವೆಂಕಟೇಶ ಎಂ.ವಿ (ಐಎಎಸ್), ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ಆಗಮ ಶಾಸ್ತ್ರ ಪ್ರಮಾಣ ಪತ್ರ, ಪದಕ ಹಾಗು ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಪೊಳಲಿ ಗಿರಿ ಪ್ರಕಾಶ್ ತಂತ್ರಿಗಳಿಗಳು ಪುರೋಹಿತರು ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯರು, ವಿವಿಧ ಬ್ರಾಹ್ಮಣ ಸಂಘಟನೆಗಳ ಪದಾಧಿಕಾರಿಗಳೂ ಆಗಿದ್ದಾರೆ.

ಪಿ ಜಿ ಜಗನ್ನಿವಾಸ ರಾವ್ ರವರು ಈ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದ ವೇದತಂತ್ರಾಗಮ ಡಿಪ್ಲೋಮಾ ಪದವಿಯನ್ನೂ ಪಡೆದಿದ್ದರು. ಇವರು ಪುತ್ತೂರು ನಗರಸಭಾ ಸದಸ್ಯರಾಗಿದ್ದು, ಹಲವಾರು ದೇವಾಲಯ, ದೈವಸ್ಥಾನಕ್ಕೆ ಸಂಬಂಧಿಸಿ ವಾಸ್ತು ವಿಚಾರದಲ್ಲಿ ಸೇವೆ ಸಲ್ಲಿಸಿದ್ದಾರೆ.









