ಒಳಮೊಗ್ರು ಗ್ರಾಮದ ಇಡಿಂಜಿಲ ನೆಲ್ಲಿತಡ್ಕದ ನಡೆದಾಡಲು ಆಗದ ರಸ್ತೆ : ಶಾಲಾ ಮಕ್ಕಳ ಪರದಾಟ – ಕಹಳೆ ನ್ಯೂಸ್

ಪುತ್ತೂರು: ಒಳಮೊಗ್ರು ಗ್ರಾಮದ ಇಡಿಂಜಿಲ ನೆಲ್ಲಿತಡ್ಕ ರಸ್ತೆ ತೀರ ಹದ ಗೆಟ್ಟಿದ್ದು, ನಡೆದಾಡಲಿಕ್ಕೂ ಆಗದ ಪರಿಸ್ಥಿತಿ ಬಂದಿದೆ. ಶಾಲಾ ಮಕ್ಕಳ ಪಾಡಂತೂ ಹೇಳತೀರದು ಎಂದು ನಾಗರಿಕರು ಅಳವತ್ತುಕೊಳ್ಳುತ್ತಿದ್ದಾರೆ.

ಪುಟ್ಟ ಪುಟ್ಟ ಶಾಲಾ ಮಕ್ಕಳನ್ನು ತುಂಬಿಕೊಂಡು ಶಾಲಾ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತದೆ. ಅಷ್ಟೆ ಅಲ್ಲದೆ ಆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವಾಗ ರಿಕ್ಷಾದ ಚಕ್ರಗಳು ಜಾರುವುದರಿಂದ ಯಾವುದೇ ಕ್ಷಣದಲ್ಲಾದರೂ ಅಪಾಯ ಸಂಭವಿಸುವುದರಲ್ಲಿ ಸಂಶಯವಿಲ್ಲ. ಹಲವು ಬಾರಿ ವಾಹನಗಳು ಕೆಸರಿನಲ್ಲಿ ಹೂತಕೊಂಡು ಮುಂದೆ ಸಾಗಲಾರದೆ ಸ್ಥಳೀಯರು ಸೇರಿ ದೂಡಿದ ಪ್ರಸಂಗವೂ ನಡೆದಿದೆ. ಆದರೆ ಇಂತಹ ಪರಿಸ್ಥಿತಿಯ ಬಗ್ಗೆ ಅರಿವಿದ್ದರೂ ಪಂಚಾಯತ್ ಕಣ್ಣು ಮುಚ್ಚಿ ಕುಳಿತಿದೆ. ಅದ್ಯಕ್ಷರನ್ನು ವಿಚಾರಿಸಿದರೆ ಅಸಹಾಯಕ ಉತ್ತರ ಮಾತ್ರ ಬರುತ್ತಿದೆ. ಊರಿನವರು ಹೇಳುವಂತೆ ದಿನಾ ಶಾಲಾ ಮಕ್ಕಳಿಗೆ ಮತ್ತು ಮದ್ರಸಕ್ಕೆ ಹೋಗಲು ತುಂಬಾ ತೊಂದರೆ ಯಾಗುತ್ತಿದ್ದು, ಇದಕ್ಕೆ ಸಂಬಂಧ ಪಟ್ಟ ಗ್ರಾಮ ಪಂಚಾಯತ್ ಇತ್ತ ತಿರುಗಿ ನೋಡುವುದೆ ಇಲ್ಲ. ರಸ್ತೆ ರೀಪೇರಿ ಆಗಲಿ, ಸೈಡಲ್ಲಿ ಇರುವ ಗಿಡ ಪೊದರು ಗಳನ್ನು ಕಡಿಯುವುದಾಗಲಿ, ಸರಿಯಾದ ನೀರು ಹೋಗಲು ಚರಂಡಿಯನ್ನು ಸಮೇತ ಮಾಡಿ ಕೊಡುವವರು ಯಾರು ಇಲ್ಲ. ತಕ್ಷಣವೇ ಇದಕ್ಕೆ ಸಂಬಂಧ ಪಟ್ಟವರು ಬಂದು ನಡೆದು ಹೋಗಲಾದರೂ ಒಂದು ದಾರಿ ಮಾಡಿ ಕೊಡಿ ಎಂದು ಸ್ಥಳೀಯರು ವಿನಂತಿಸುತ್ತಿದ್ದಾರೆ.

ಇಲ್ಲಿ ರಸ್ತೆಯಲ್ಲಿ ಓಡಾಡುವವರು ಹೆಚ್ಚಿನವರು ಬಡ ವರ್ಗದ ಜನರೇ ಆಗಿದ್ದು, ಅದೇ ಈ ನಿರ್ಲಕ್ಷ್ಯಕ್ಕೆ ಕಾರಣ ಇರಬಹುದು. ಇನ್ನೊಂದು ವಿಶೇಷವೆಂದರೆ ಇದು ಎಲ್ಲೋ ಇರುವ ಕುಗ್ರಾಮದ ರಸ್ತೆಯಲ್ಲ, ಮಂಗಳೂರು-ಪುತ್ತೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ ಒಂದು ಕಿಲೋ ಮೀಟರ್ ನಷ್ಟು ದೂರದಲ್ಲಿದೆಯಷ್ಟೇ. ಹಿರಿಯ ನಾಗರಿಕರೂ ಮಕ್ಕಳು ಹೆಚ್ಚಾಗಿರುವ ಇಲ್ಲಿ ಯಾರಿಗಾದರೂ ಮಳೆಯ ಸಮಯದಲ್ಲಿ ಅಸೌಖ್ಯವಾದಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಲೂ ಕೂಡ ಆಗದ ಪರಿಸ್ಥಿತಿ. ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಬೇಕು.









