
ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿ ಭಾಗವಾಗಿ ನಿರ್ಮಾಣಗೊಂಡ ಬಹುನಿರೀಕ್ಷೆಯ ಕಲ್ಲಡ್ಕ ಪ್ಲೈ ಓವರ್ ಇಂದಿನಿಂದ ವಾಹನ ಸಂಚಾರಕ್ಕೆ ತೆರೆದುಕೊಂಡಿದ್ದು, ಮಾಣಿ ಭಾಗದಿಂದ ಬಿ.ಸಿ.ರೋಡು ಭಾಗಕ್ಕೆ ಆಗಮಿಸುವ ವಾಹನಗಳು ಫ್ಲೈ ಓವರ್ ಮೂಲಕ ಸಂಚರಿಸುತ್ತಿದೆ.
ಇಂದು ಬೆಳಿಗ್ಗೆ 10.30 ಗಂಟೆಗೆ ಪ್ಲೈ ಓವರ್ ನ ಆರಂಭಿಕ ಭಾಗವಾದ ಪೂರ್ಲಿಪಾಡಿಯಲ್ಲಿ ಸೇರಿದ ಕಲ್ಲಡ್ಕದ ನಾಗರಿಕರು ಹಿರಿಯ ಮುದಾಳು, ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಅವರ ನೇತೃತ್ವದಲ್ಲಿ ಸೇರಿದ ಕಲ್ಲಡ್ಕದ ನಾಗರಿಕರು ಫ್ಲೈಓವರ್ ಸಂಚಾರವನ್ನು ಸ್ವಾಗತಿಸಿದ್ದಾರೆ.
ಡಾ.ಪ್ರಭಾಕರ ಭಟ್ ಮಾತನಾಡಿ, ಅನೇಕ ವರ್ಷಗಳ ಕನಸು ಕಲ್ಲಡ್ಕ ದಲ್ಲಿ ನನಸಾಗುವ ದಿನ ಇದು. ಇಡೀ ರಾಜ್ಯದಲ್ಲಿ ಬಹಳ ದೊಡ್ಡ ಸಂಪರ್ಕ ಸೇತು ಆಗಿರುವ ಈ ಫ್ಲೈ ಓವರ್ ಕಲ್ಲಡ್ಕದಲ್ಲಿ ನಿರ್ಮಾಗೊಂಡಿದೆ. ಕೆ.ಎನ್.ಆರ್.ಸಂಸ್ಥೆಯವರು ಹೇಳಿದ ಸಮಯಕ್ಕೆ ಸರಿಯಾಗಿ ತುಂಬಾ ಚೆನ್ನಾಗಿ ಯಾವುದೇ ರೀತಿಯ ಮೋಸ ವಂಚನೆ ಇಲ್ಲದೆ ಕಾಮಗಾರಿ ಮುಗಿಸಿದ್ದಾರೆ. ಬೆಂಗಳೂರು- ಮಂಗಳೂರು ವಾಹನ ಸಂಚಾರ ಅತ್ಯಂತ ದೀರ್ಘ ಕಲ್ಲಡ್ಕ ಶ್ರೀರಾಮ ಮೇಲ್ಸೆತುವೆ ಸಂಚಾರಕ್ಕೆ ಮುಕ್ತಗೊಂಡಿದೆ. ಇದಕ್ಕೆ ಕಾರಣೀಭೂತರಾದಂತಹ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಶ್ರೀ ಮಹಾಗಣಪತಿ ,ಶ್ರೀರಾಮನನ್ನು ನೆನೆದುಕೊಂಡು ಪ್ರಾರಂಭ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರುಗಳಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್, ವಿಠಲ ನಾಯ್ಕ, ಹಿರಣ್ಮಯಿ, ಯತೀನ್ ಪೂಜಾರಿ, ಕಂಪೆನಿಯ ಪಿ.ಎಮ್.ಮಹೇಂದ್ರ ಸಿಂಗ್, ಎ.ಜಿ.ಎಮ್ ರೋಹಿತ್ ರೆಡ್ಡಿ ಡಿಎಮ್ ರಘನಾಥ ರೆಡ್ಡಿ, ಡೆಪ್ಯುಟಿ ಪ್ರಾಜೆಕ್ಟ್ ಮ್ಯಾನೇಜರ್ ಅಯ್ಯಪ್ಪ ಸ್ವಾಮಿ, ಜನಾರ್ಧನ ಬೊಂಡಾಲ, ಶಂಭು ಕೋರ್ಯ, ಲೋಕಾನಾಂದ, ಸುರೇಶ್ ಶೆಟ್ಟಿ, ಚಂದ್ರ ಶೇಖರ ಟೈಲರ್, ಪೂವಪ್ಪ, ಚಿತ್ತರಂಜನ್, ಸುಜಿತ್ ಕೊಟ್ಟಾರಿ,ಸತೀಶ್ ಕುಮಾರ್ ಶಿವಗಿರಿ,ತಿರುಮಲೇಶ್ ಭಟ್,ಗೋಪಾಲ ಶೆಣೈ,ನಾಗೇಶ್ ಕಲ್ಲಡ್ಕ,ಮಾದವ ಸಾಲ್ಯಾನ್,ಸನತ್ ರವಿಕುಮಾರ್, ಕೂಸಪ್ಪ, ಮತ್ತಿತರರು ಉಪಸ್ಥಿತರಿದ್ದರು.









