Recent Posts

Saturday, April 25, 2026
ದೆಹಲಿಸುದ್ದಿ

ಭಾರತೀಯರನ್ನು ಮದುವೆಯಾಗಿದ್ದರೂ ಪಾಕ್ ಪ್ರಜೆಗಳಿಗೆ ಇಲ್ಲಿ ನೆಲೆಸುವ ಹಕ್ಕಿಲ್ಲ -ಕಹಳೆ ನ್ಯೂಸ್

ಶ್ರೀನಗರ: ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ದಾಳಿಯ ಬೆನ್ನಲ್ಲೇ, ಪಾಕ್‌ ಪ್ರಜೆಗಳ ಗಡೀಪಾರಿಗೆ ಕೇಂದ್ರ ಸರ್ಕಾರ ನೀಡಿರುವ ಆದೇಶವನ್ನು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಸ್ವಾಗತಿಸಿದ್ದು, ‘ಭಾರತೀಯ ನಾಗರಿಕರನ್ನು ಮದುವೆಯಾಗಿದ್ದರೂ, ದೇಶದಲ್ಲಿ ವಾಸಿಸುವ ಯಾವುದೇ ಹಕ್ಕು ಪಾಕಿಸ್ತಾನಿಯರಿಗೆ ಇಲ್ಲ’ ಎಂದು ಹೇಳಿದೆ.

ಜಮ್ಮು ಮತ್ತು ಕಾಶ್ಮೀರ ಬಿಜೆಪಿ ವಕ್ತಾರ ಸುನೀಲ್‌ ಸೇಥಿ ಅವರು, ‘ಅಂತಹವರು (ಭಾರತೀಯರನ್ನು ವಿವಾಹವಾಗಿರುವವರು) ಸ್ಲೀಪರ್‌ ಸೆಲ್‌ಗಳಾಗಿರಬಹುದು. ಅವರನ್ನು, ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ನೀಚ ಕೃತ್ಯದ ಸಲುವಾಗಿ ಭಾರತದಲ್ಲಿರಿಸಿರುವ ಸಾಧ್ಯತೆ ಇದೆ’ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪಾಕಿಸ್ತಾನ ಮೂಲದ ಯುವತಿಯನ್ನು ಮದುವೆಯಾದ ಮಾಹಿತಿಯನ್ನು ಗೋಪ್ಯವಾಗಿಟ್ಟ ಕಾರಣ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಯೋಧನನ್ನು ರಕ್ಷಣಾ ಇಲಾಖೆ ಶನಿವಾರವಷ್ಟೇ ಕರ್ತವ್ಯದಿಂದ ವಜಾ ಮಾಡಿದೆ. ಇದರ ಬೆನ್ನಲ್ಲೇ, ಸೇಥಿ ಹೇಳಿಕೆ ನೀಡಿದ್ದಾರೆ.

‘ಸಂದರ್ಭಗಳು ಅಥವಾ ಸಮರ್ಥನೆಗಳು ಏನೇ ಇರಲಿ. ಭಾರತೀಯ ನಾಗರಿಕರೊಂದಿಗೆ ವೈವಾಹಿಕ ಸಂಬಂಧ ಹೊಂದಿದ್ದರೂ, ಈ ರೀತಿ ಅವಧಿ ಮೀರಿ ವಾಸಿಸುವ, ಭಾರತದಲ್ಲಿ ಉಳಿದುಕೊಳ್ಳುವ ಹಕ್ಕನ್ನು ಹೊಂದಿರುವುದಿಲ್ಲ ಅಥವಾ ಈ ರೀತಿ ಭಾವನಾತ್ಮಕ ನೆಲೆಯಲ್ಲಿ ದೀರ್ಘಾವಧಿಯ ವೀಸಾ ಪಡೆಯಲಾಗದು’ ಎಂದು ಪ್ರತಿಪಾದಿಸಿದ್ದಾರೆ.

ಮುನೀರ್ ಅಹ್ಮದ್‌ ಎಂಬವರು ಸಿಆರ್‌ಪಿಎಫ್‌ನಿಂದ ವಜಾಗೊಂಡ ಸಿಬ್ಬಂದಿ. ಅರೆಸೇನಾ ಪಡೆಯ 41ನೇ ಬೆಟಾಲಿಯನ್‌ನಲ್ಲಿದ್ದ ಅವರನ್ನು, ಇಲಾಖಾ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್ ಕಣಿವೆ ಬಳಿ ಭಯೋತ್ಪಾದಕರು ಏಪ್ರಿಲ್‌ 22ರಂದು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಕರ್ನಾಟಕದ ಮೂವರು ಮತ್ತು ವಿದೇಶದ ಇಬ್ಬರು ಸೇರಿ ಒಟ್ಟು 26 ಮಂದಿ ಮೃತಪಟ್ಟಿದ್ದಾರೆ. ಘಟನೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ರಾಜತಾಂತ್ರಿಕ ಸಂಬಂಧ ತುಂಡಾಗಿದೆ. ಪಾಕಿಸ್ತಾನದ ಪ್ರಜೆಗಳಿಗೆ ದೇಶ ತೊರೆಯುವಂತೆ ಭಾರತ ಸರ್ಕಾರ ಆದೇಶಿಸಿದೆ. ಇದೇ ವೇಳೆ, ಪಾಕಿಸ್ತಾನದ ಮಿನಾಲ್‌ ಖಾನ್‌ ಎಂಬವರನ್ನು ಅಹ್ಮದ್‌ ವರಿಸಿರುವ ವಿಚಾರ ಬೆಳಕಿಗೆ ಬಂದಿದೆ.

2024ರ ಮೇ 24ರಂದು ವಿಡಿಯೊ ಕರೆ ಮೂಲಕ ಪಾಕಿಸ್ತಾನದ ಮಿನಾಲ್‌ – ಅಹ್ಮದ್ ವಿವಾಹವಾಗಿದ್ದರು. ನಂತರ ಮಿನಾಲ್‌ ಅವರು ಅ‌ಲ್ಪಾವಧಿ ವೀಸಾ ಪಡೆದು ಜಮ್ಮುವಿಗೆ ಬಂದಿದ್ದರು. ವೀಸಾ ಅವಧಿ ಮಾರ್ಚ್‌ 22ರಂದೇ ಮುಕ್ತಾಯವಾಗಿತ್ತು. ಆದರೆ, ಮದುವೆ ವಿಚಾರ ಮತ್ತು ಯುವತಿಯು ಭಾರತದಲ್ಲಿ ಅವಧಿ ಮೀರಿ ನೆಲೆಸಿದ್ದನ್ನು ಅಹ್ಮದ್ ಗೋಪ್ಯವಾಗಿಟ್ಟಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಕ್ಷಣಾ ಇಲಾಖೆ ಕ್ರಮ ಕೈಗೊಂಡಿದೆ.

ಗಡೀಪಾರು ಆದೇಶಕ್ಕೆ ನ್ಯಾಯಾಲಯ ಬುಧವಾರ ಕೊನೇ ಕ್ಷಣದಲ್ಲಿ ತಡೆ ನೀಡಿದ್ದು, ಪಾಕ್‌ಗೆ ವಾಪಸ್‌ ಆಗಲು ಅಮೃತಸರದ ಅಟ್ಟಾರಿ ಗಡಿ ತಲುಪಿದ್ದ ಮಿನಾಲ್‌ ಜಮ್ಮುವಿಗೆ ಮರಳಿದ್ದಾರೆ. ಮಂಗಳವಾರ ಜಮ್ಮುವಿನಿಂದ ಹೊರಡುವ ಸಂದರ್ಭ ಅವರು, ತಮ್ಮನ್ನು ಗಡೀಪಾರು ಮಾಡುತ್ತಿರುವುದು ಅನ್ಯಾಯ. ತಮಗೂ ಪಹಲ್ಗಾಮ್‌ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು.