
ಪುತ್ತೂರು: ಹಳ್ಳಿ ಇಲ್ಲದೆ ಭಾರತದ ಕಲ್ಪನೆ ಸಾಧ್ಯವಿಲ್ಲ. ಸ್ವಚ್ಛ ಮನಸ್ಸಿನ, ಸುಂದರ ಮನೆಯ , ಸ್ವಚ್ಛ ಭಾರತ ಹಳ್ಳಿಯಲ್ಲಿದೆ. ಹೀಗಾಗಿ ಭಾರತದ ಆತ್ಮವೇ ಗ್ರಾಮ. ಈ ಗ್ರಾಮದ ಹೊರತಾದ ಭಾರತದ ನೋಡಲು ಸಾಧ್ಯವೇ ಇಲ್ಲ ಎಂದು ಭಾರತ ಪರಿಕ್ರಮ ಯಾತ್ರೆ ನಡೆಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸೀತಾರಾಮ ಕೆದಿಲಾಯ ಹೇಳಿದರು.
ಅವರು ಭಾನುವಾರ “ಬಹುವಚನಂ”ನ ಪದ್ಮಿನೀ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಳ್ಳಿ ಇಲ್ಲದೆ ಭಾರತ ಇಲ್ಲ. ನೈಜ ಭಾರತ ಉಳಿಯಬೇಕಾದರೆ, ಬೆಳೆಯಬೇಕಾದರೆ ಗ್ರಾಮ ಉಳಿಯಬೇಕು. ಭಾರತದ ಪ್ರಾಚೀನ ಇತಿಹಾಸ ನೋಡಿದರೆ ಹಳ್ಳಿಯಲ್ಲೇ ಶುದ್ಧತೆ ಇದೆ.

ಶುದ್ದ ಗಾಳಿ, ನೀರು, ಆಹಾರಕ್ಕೆ ಹಳ್ಳಿಯೇ ಆಧಾರ. ಸಂಸ್ಕಾರಯುಕ್ತವಾದ ಶಿಕ್ಷಣವೂ ಹಳ್ಳಿಯಲ್ಲಿ ಲಭ್ಯವಾಗುವುದು. ರಾಜರಿಂದ ತೊಡಗಿ, ದೇವರುಗಳೂ ಹಳ್ಳಿಯನ್ನೇ ಆಶ್ರಯಿಸಿದ್ದು ಕಾಣುತ್ತದೆ. ಹೀಗಾಗಿ ಪ್ರಾಚೀನ ಭಾರತವೂ ಹಳ್ಳಿಯನ್ನೇ ಅಲವಂಬಿಸಿತ್ತು ಎನ್ನುವುದಕ್ಕೆ ಇದೇ ಉದಾಹರಣೆ. ಹಳ್ಳಿಯಲ್ಲಿ ಹಣದ ಮೇಲೆ ಜೀವನ ಅವಲಂಬಿತವಾಗಿಲ್ಲ.
ಪರಸ್ಪರಾವಲಂಬನೆ ಇತ್ತು. ಹೀಗಾಗಿಯೇ ಎಲ್ಲರನ್ನೂ ಪ್ರೀತಿಸುತ್ತಿದ್ದರು. ಹೀಗಾಗಿ ಸಮರಸ, ಸದ್ಭಾವನೆಯ ಬದುಕು ಇತ್ತು. ಮನುಷ್ಯ, ಮನುಷ್ಯನನ್ನು ಪ್ರೀತಿಸುವ ಬದುಕು ಇತ್ತು. ಆದರೆ ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆ ಈ ಆತ್ಮವನ್ನು ಹಾಳು ಮಾಡುವ ಯತ್ಮದಲ್ಲಿದೆ ಎಂಬುದನ್ನು ಗಮನಿಸಬೇಕು ಎಂದರು.











