ಧಾರವಾಢದ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐ ವಿಶೇಷ ಅಭಿಯೋಜಕರನ್ನಾಗಿ ವಕೀಲ ಎಂ ಗಂಗಾಧರ ಶೆಟ್ಟಿ ಅವರನ್ನು ನೇಮಿಸಿ ಸಿಬಿಐ ಆದೇಶ ಹೊರಡಿಸಿದೆ. 2016ರಲ್ಲಿ ಜಿಮ್ ಒಂದರಲ್ಲಿ ನಡೆದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಪ್ರಮುಖ ಆರೋಪಿಯಾಗಿಯಾಗಿದ್ದಾರೆ. ಹಳೇ ವೈಷಮ್ಯದಿಂದಲೇ ಕುಲಕರ್ಣಿ ಹತ್ಯೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ವಕೀಲ ಎಂ ಗಂಗಾಧರ್ ಶೆಟ್ಟಿಯವರು ಕುದ್ರೆಪ್ಪಾಡಿ ಮಂಜಪ್ಪ ಶೆಟ್ಟಿ ಮತ್ತು ಮಿತ್ತಳಿಕೆ ಸುಶೀಲ ಶೆಟ್ಟಿಯವರ ಪುತ್ರ. ಪ್ರಥಾಮಿಕ ವಿದ್ಯಾಭ್ಯಾಸವನ್ನು ಸರಕಾರಿ ಶಿರಿಯಾ ಶಾಲೆಯಲ್ಲಿ, ಬಳಿಕ ಹೈಸ್ಕೂಲ್ ಹಾಗೂ ಪಿಯುಸಿಯನ್ನು ಅಳಿಕೆಯ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ, ಕಾನೂನು ವಿದ್ಯಾಭ್ಯಾಸವನ್ನು ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಿತ್ತಳಿಕೆ ದಿ. ವಿಠಲ ಶೆಟ್ಟಿ ಕಛೇರಿಯಲ್ಲಿ ಜೂನಿಯರ್ ಆಗಿ ಸೇರಿ, ಕಳೆದ 20ವರ್ಷಗಳಿಂದ ವಿಠಲ್ ಶೆಟ್ಟಿ ಅಸೋಸಿಯೇಟ್ಸ್ ಹೆಸರಿನಲ್ಲಿ ಕಚೇರಿಯನ್ನಿಟ್ಟುಕೊಂಡಿದ್ದಾರೆ. ಇವರು 2009ರಿಂದ 2012ರವರೆಗೆ ತ್ವರಿತಪಥ ನ್ಯಾಯಾಲಯದಲ್ಲಿ ಸ್ಪೆಷಲ್ ಪಿಪಿ ಯಾಗಿ ಅನುಭವ ಹೊಂದಿದ್ದು, ನಂತರ ಹಲವಾರು ಕ್ಲಿಷ್ಠ ಕ್ರಿಮಿನಲ್ ಪ್ರಕರಣಗಳನ್ನು ನಡೆಸುತ್ತಿದ್ದಾರೆ. ಗೌರಿಶಂಕರ್ ಹತ್ಯೆ ಪ್ರಕರಣ ದಲ್ಲಿ ಕೆಲವೊಂದು ಆರೋಪಿಗಳ ಪರ ವಾದಿಸುತ್ತಿದ್ದಾರೆ. ಅಲ್ಲದೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ಪ್ರಕರಣದಲ್ಲಿ ಕೂಡಾ ಸರ್ಕಾರಿ ಅಭಿಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.










