Thursday, May 14, 2026
ಸುದ್ದಿ

ಪೇಜಾವರ ಅಜರಾಮರ : ರಾಜ್ಯಾದ್ಯಂತ 3 ದಿನ ಶೋಕಾಚರಣೆ ; ಸಿಎಂ ಬಿಎಸ್‍ ಯಡಿಯೂರಪ್ಪ – ಕಹಳೆ ನ್ಯೂಸ್

ಉಡುಪಿ: ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಆಚರಿಸುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಆಚರಿಸಲು ಸೂಚಿಸಲಾಗಿದೆ. ಅಲ್ಲದೆ ಅವರನ್ನು ಬೆಂಗಳೂರಿನಲ್ಲಿ ಅಂತ್ಯ ಸಂಸ್ಕಾರ ಮಾಡಬೇಕಿರುವುದರಿಂದ ಸ್ಥಳಾಂತರಿಸಬೇಕಿದೆ. ಬೆಂಗಳೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ 40-50 ವರ್ಷಗಳಿಂದ ಪೇಜಾವರ ಶ್ರೀಗಳ ಹಾಗೂ ನನ್ನ ಒಡನಾಟವಿತ್ತು. ಎಲ್ಲ ಸಂದರ್ಭಗಳಲ್ಲೂ ಬಂದು ಅವರೊಂದಿಗೆ ಮಾತನಾಡಿ ಅವರ ಬಳಿ ಆಶೀರ್ವಾದ ಪಡೆಯುತ್ತಿದ್ದೆ. ಒಂದು ತಿಂಗಳ ಹಿಂದೆ ಬೆಂಗಳೂರಿನಲ್ಲಿರುವ ಅವರ ಮಠಕ್ಕೆ ಕರೆಸಿಕೊಂಡಿದ್ದರು. ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ಮಾಡಿದ್ದರು. ಅವರು ಒಂದು ವೈದ್ಯಕೀಯ ಕಾಲೇಜು ನಿರ್ಮಿಸುತ್ತಿದ್ದಾರೆ. ಅದಕ್ಕೆ 10 ಕೋಟಿ ರೂ.ಗಳನ್ನು ಸ್ಥಳದಲ್ಲೇ ಮಂಜೂರು ಮಾಡಿಸಿ, ಮಾತಾಡಿಕೊಂಡು ಬಂದಿದ್ದೆ. ಎಲ್ಲ ಸಂದರ್ಭಗಳಲ್ಲೂ ನನಗೆ ಏನಾದರೂ ಸಮಸ್ಯೆ ಎದುರಾದಾಗ ಅವರ ಬಳಿ ತೆರಳಿ ಚರ್ಚಿಸುತ್ತಿದ್ದೆ. ನಂತರ ಅವರ ಸಲಹೆ ಪಡೆದು ಅದರಂತೆ ನಡೆದುಕೊಳ್ಳುತ್ತಿದ್ದೆ ಎಂದು ನೆನಪುಗಳನ್ನು ಮೆಲುಕು ಹಾಕಿದರು.

ಬಹಳ ಮುಖ್ಯವಾಗಿ ಎಂದರೆ ರಾಮಮಂದಿರ ಕಟ್ಟುವ ಸಂದರ್ಭದಲ್ಲಿ ಬೆಳಗ್ಗೆ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ಶ್ರೀಗಳು ಹೋದಾಗ ಅವರ ಜೊತೆಗಿದ್ದ 10-12 ಜನರಲ್ಲಿ ನಾನೂ ಒಬ್ಬ. ಹೀಗೆ ನಿರಂತರ ಸಂಪರ್ಕ ಹೊಂದಿದ್ದೆ. ನಮ್ಮ ದೇಶದಲ್ಲಿ ಈ ರೀತಿಯ ಸ್ವಾಮೀಜಿ ಸಿಗುವುದು ಅಪರೂಪ. ದೇಶದ ಉದ್ದಗಲಕ್ಕೂ ನಿರಂತರ ಪ್ರವಾಸ ಮಾಡಿ ಧರ್ಮ ಕಾರ್ಯ ಮಾಡಿದಂತವರು. ಅವರು ಆಸ್ಪತ್ರೆ ಸೇರುವ ಹಿಂದಿನ ಎರಡು ದಿನವೂ ನಿರಂತರ ಪ್ರವಾಸ ಮಾಡಿ ಮುಗಿಸಿಕೊಂಡು ಬಂದು ನಂತರ ಆಸ್ಪತ್ರೆ ಸೇರಿದ್ದರು ಎಂದು ತಿಳಿಸಿದರು.

ಇಂತಹ ಯತಿವರ್ಯರನ್ನು ಕಾಣುವುದು ಅಪರೂಪ, ಮಹಾನ್ ಪೂಜ್ಯರನ್ನು ಕಳೆದುಕೊಂಡು ಈ ದೇಶ, ರಾಜ್ಯ ಬಡವಾಗಿದೆ. ಅವರು ಬದುಕಿದ್ದಾಗಲೇ ರಾಮ ಮಂದಿರ ಕಟ್ಟಬೇಕೆಂಬ ಆಸೆ, ಅಪೇಕ್ಷೆ ಅವರಿಗಿತ್ತು. ಅವರ ಆಸೆಯಂತೆಯೇ ರಾಮ ಮಂದಿರ ಕಟ್ಟುವಂತೆ ಸುಪ್ರೀಂ ಕೋರ್ಟಿನಲ್ಲಿ ತೀರ್ಮಾನವಾಯಿತು. ಆದರೆ ಅದನ್ನು ನೋಡುವ ಸೌಭಾಗ್ಯ ಅವರಿಗೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.