
ಪುತ್ತೂರು: ಮೇಜರ್ ಧ್ಯಾನ್ಚಂದ್ ಭಾರತವಷ್ಟೇ ಅಲ್ಲ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಟ ಹಾಕಿ ಕ್ರೀಡಾಪಟು. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ರನ್ನು ಬೆರಗುಗೊಳಿಸಿದ ಇವರು
ಹಾಕಿಯ ಮಾಂತ್ರಿಕ ಎನ್ನುವ ಬಿರುದಿಗೆ ಭಾಜನರಾಗಿದ್ದರು. ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ದಿನೇಶ್ ಪ್ರಸನ್ನ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತಾಡಿದರು. ಎಳವೆಯಲ್ಲಿ ಕುಸ್ತಿಯಲ್ಲಿ ಆಸಕ್ತಿಹೊಂಡಿದ್ದ ಧ್ಯಾನ್ಚಂದ್ ಅವರು ನಂತರ ಹಾಕಿಯತ್ತ ಆಕರ್ಷಿತರಾದರು.
ಅವರ ಆಟದ ಬಗ್ಗೆ ಭಯಭೀತರಾಗಿದ್ದ ಹಾಲೆಂಡಿನ ಅಧಿಕಾರಿಗಳು ಅವರ ಹಾಕಿ ಸ್ಟಿಕ್ಕನ್ನು ಮುರಿದು ಅದನ್ನು ಪರೀಕ್ಷಿಸಿದ್ದರು ಎಂದರು. ನಮಗೀಗ ಎಲ್ಲವೂ ಮೊಬೈಲೇ ಆಗಿದೆ. ದೈಹಿಕ ವ್ಯಾಯಾಮವಿಲ್ಲದೆ ಮುಂದಿನ ದಿನಗಳಲ್ಲಿ ಯುವಜನರ ಬದುಕು ಹೈರಾಣಾಗಲಿದೆ ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ
ಮಾತನಾಡಿ ನಮ್ಮ ಕಾಲೇಜು ಕ್ರೀಡಾ ಚಟುವಟಿಕೆಗಳಿಗೆ ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಿದೆ. ಕಾಲೇಜಿನ ಅತ್ಲೆಟಿಕ್ ತಂಡವು ಮೂರು ಬಾರಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಛಾಂಪಿಯನ್ ಆಗಿ ಹೊರಹೊಮ್ಮಿತ್ತು ಎಂದರು. ಕಾಲೇಜಿನ ಕ್ರೀಡಾ ಚಟುವಟಿಕೆಗಳ ಬಗ್ಗೆ ಈ ಸಂದರ್ಭದಲ್ಲಿ ಮಾಹಿತಿಯನ್ನು ನೀಡಿದರು.
ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ.ಕೆ ಶುಭ ಹಾರೈಸಿದರು. ಕಾಲೇಜಿನ ಕ್ರೀಡಾ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಅಂತಿಮ ವರ್ಷದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಭುವನ್ರಾಮ್ ಜಗದೀಶ್ ಭಂಡಾರಿ ಹಾಗೂ ಜತೆ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಅರ್ಪಿತಾ ಬಾಲಚಂದ್ರ ನಾಯ್ಕ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರಯೋಗಾಲಯ ಮೇಲ್ವಿಚಾರಕ ಹರಿಪ್ರಸಾದ್.ಡಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.











