
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಇದ್ದಿದ್ದರಿಂದ ಅವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರಾಗಿದ್ದರು ಎಂದು ಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಸಿದ್ದರಾಮಯ್ಯ ಮತ್ತು ನಾನು ಸೇರಿ ಪಟ್ಟಿ ಸಿದ್ಧಪಡಿಸಿದ್ದೆವು. ಅವ್ರ ಹುಟ್ಟುಹಬ್ಬ ಇತ್ತು ಅದಕ್ಕೇ ಅವರು ಬಂದಿಲ್ಲ. ಯಾವ ಅಸಮಾಧಾನವೂ ಇಲ್ಲ ಎಂದಿದ್ದಾರೆ.
ಕೊನೆ ಕ್ಷಣದಲ್ಲಿ ಸಚಿವರ ಪಟ್ಟಿಯಲ್ಲಿ ಅದಲು-ಬದಲು ವಿಚಾರವಾಗಿ, ಹೈಕಮಾಂಡ್ ಕಳಿಸಿದ ಪಟ್ಟಿಯಂತೆ ಸ್ಥಾನ ಸಿಕ್ಕಿದೆ. ತಾಂತ್ರಿಕ ಸಮಸ್ಯೆಯಾಗಿ ಗಾಯತ್ರಿ ಶಾಂತೇಗೌಡರನ್ನು ಕೈ ಬಿಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನಗೊಂಡು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ಹೊರಗುಳಿದಿರುವುದು ಗಮನ ಸೆಳೆದಿದೆ. ಮತ್ತು ನಾನಾ ಚರ್ಚೆಗೆ ಕಾರಣವಾಗಿದೆ. ತಮ್ಮ ಹುಟ್ಟುಹಬ್ಬದ ಅಂಗವಾಗಿ ಅಧಿಕೃತ ನಿವಾಸ ಕಾವೇರಿಯಲ್ಲೆ? ಉಳಿದು ಅಭಿಮಾನಿಗಳು, ಬೆಂಬಲಿಗರಿಂದ ಶುಭಾಶಯ ಸ್ವಿಕರಿಸುತ್ತಾ ಖುಷಿ ಖುಷಿಯಾಗಿದ್ದ ಸಿದ್ದರಾಮಯ್ಯ ಅವರು, ನೂತನ ಸಚಿವರ ಪಟ್ಟಿಯನ್ನು ಎಐಸಿಸಿ ಹೈಕಮಾಂಡ್ ಪ್ರಕಟಿಸುತ್ತಿದ್ದಂತೆ ಕೆರಳಿ ಕೆಂಡವಾದರು. ತಮ್ಮ ಅಭಿಪ್ರಾಯ ಕಡೆಗಣಿಸಿ ರಾಜಧಾನಿಯ ಪ್ರಭಾವಿ ವ್ಯಕ್ತಿಗೆ ಮತ್ತೆ ಸಂಪುಟದಲ್ಲಿ ಅವಕಾಶ ಕಲ್ಪಿಸಿದ್ದು ಸಿದ್ದರಾಮಯ್ಯ ಅವರನ್ನು ಸಿಟ್ಟಿಗೇಳುವಂತೆ ಮಾಡಿದೆ ಎನ್ನಲಾಗಿದೆ.











