Thursday, July 9, 2026
ಸುದ್ದಿ

ವಯನಾಡಿನಲ್ಲಿ ಭೀಕರ ಗುಡ್ಡ ಕುಸಿತ : ನಾಪತ್ತೆಯಾದ ಐವರ ಶೋಧ ಕಾರ್ಯಕ್ಕೆ ಮಳೆ ಅಡ್ಡಿ – ಕಹಳೆ ನ್ಯೂಸ್

ವಯನಾಡು: ಬೆಳಗ್ಗೆಯಿಂದಲೇ ವಯನಾಡಿನಲ್ಲಿ ಮಳೆಯ ನಡುವೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾಗಿರುವ ಐವರಿಗೆ ಶೋಧ ಕಾರ್ಯ ನಡೆಯುತ್ತಿದೆ.

ಮೆಪ್ಪಾಡಿ ಬಳಿ ಸುರಂಗ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಭೀಕರ ಗುಡ್ಡ ಕುಸಿತ  ಸಂಭವಿಸಿ ಮೂವರು ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ. ನಾಪತ್ತೆಯಾಗಿರುವ ಕಾರ್ಮಿಕರ ಶೋಧ ಕಾರ್ಯಕ್ಕೆ ಮಳೆ ತೀವ್ರ ಅಡ್ಡಿಪಡಿಸುತ್ತಿದೆ. ಮಣ್ಣು ಇಡಿಯಾಗಿ ಕುಸಿಯುತ್ತಿರುವುದರಿಂದ ಕಾರ್ಯಾಚರಣೆ ಸವಾಲಾಗಿ ಪರಿಣಮಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಮೆಪ್ಪಾಡಿ ಬಳಿ ಸುರಂಗ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದ್ದ ವೇಳೆ, ಏಕಾಏಕಿ ಬೃಹತ್ ಗಾತ್ರದ ಬೆಟ್ಟ ಕುಸಿದು ಬಿದ್ದಿತ್ತು. ಸುನಾಮಿಯಂತೆ ನುಗ್ಗಿ ಬಂದ ಕೆಸರಿನ ಆರ್ಭಟಕ್ಕೆ ಕ್ಷಣಮಾತ್ರದಲ್ಲಿ ಕಾಮಗಾರಿ ಸ್ಥಳವು ಸಂಪೂರ್ಣವಾಗಿ ಧ್ವಂಸಗೊಂಡಿದೆ. ಕೊಚ್ಚಿ ಬಂದ ಟನ್ ಗಟ್ಟಲೆ ಮಣ್ಣಿನ ಅಡಿಯಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಭಾರಿ ಯಂತ್ರೋಪಕರಣಗಳು ಹಾಗೂ ವಾಹನಗಳು ಸಿಲುಕಿಕೊಂಡಿವೆ. ಮಣ್ಣಿನ ಅಡಿಯಿಂದ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನುಳಿದವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ಗುಡ್ಡ ಕುಸಿತದ ರಭಸಕ್ಕೆ ಸುತ್ತಮುತ್ತಲಿನ ಕೆಲವು ಮನೆಗಳು ಕೊಚ್ಚಿ ಹೋಗಿವೆ. ಆದರೆ, ಸಮಯ ಪ್ರಜ್ಞೆಯಿಂದ ಮನೆಯಲ್ಲಿದ್ದವರು ಮೊದಲೇ ಸುರಕ್ಷಿತ ಸ್ಥಳಗಳಿಗೆ ಓಡಿ ಹೋಗಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂದು ಸಿಎಂ ಭೇಟಿ
ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಇಂದು ದುರಂತದ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸಂತ್ರಸ್ತರಿಗೆ ಸೂಕ್ತ ನೆರವು ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದಷ್ಟೇ ಭೀಕರ ಭೂಕುಸಿತಕ್ಕೆ ನೂರಾರು ಜೀವಗಳನ್ನು ಬಲಿ ಪಡೆದಿದ್ದ ವಯನಾಡಿನಲ್ಲಿ, ಈಗ ಮತ್ತೆ ಗುಡ್ಡ ಕುಸಿತ ಉಂಟಾಗಿರುವುದು ಸ್ಥಳೀಯ ಜನರಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ.